ಯಾದಗಿರಿ: ರಾಷ್ಟ್ರೀಯ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದ ಗಾಂಧಿ ವೃತ್ತದಲ್ಲಿ ತಾನಜೀಮುಲ್ ಮುಸ್ಲಿಮೀನ್ ಬೌತುಲ್ಲಾ ಮಾಲ್ ಸಂಘಟನೆ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳು ಸೋಮವಾರ ಕಪ್ಪು ಬಟ್ಟೆ ಕಟ್ಟಿಕೊಂಡು ಬೃಹತ್ ಪ್ರತಿಭಟನೆ ನಡೆಸಿದವು.
ಗಾಂಧಿ ಚೌಕ್ನಲ್ಲಿ ಜಮಾಯಿಸಿದ ನೂರಾರು ಮುಸ್ಲಿಂ ಮುಖಂಡರು, ಯುವಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಬಾರದು ಎಂದು ಆಗ್ರಹಿಸಿದರು. ಪೌರತ್ವ ಕಾಯ್ದೆ ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದೇಶದ ಜಾತ್ಯಾತೀತ ತತ್ವವನ್ನು ನಾಶ ಮಾಡುವ ಹುನ್ನಾರ ಒಳಗೊಂಡಿರುವ ಈ ಕಾಯ್ದೆಯನ್ನು ಯಾರು ಬೆಂಬಲಿಸುವುದಿಲ್ಲ ಎಂದು ಘೋಷಣೆ ಕೂಗಿದರು.
ಬೈತುಲ್ಲಾ ಮಾಲ್ ಸಂಘಟನೆ ಅಧ್ಯಕ್ಷ ಲಾಯಕ್ ಹುಸೇನ್ ಬಾದಲ್ ಮಾತನಾಡಿ, ‘ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಕಾಯ್ದೆಗೆ ನಮ್ಮ ವಿರೋಧ ಇದೆ. ಕೂಡಲೇ ಕಾಯ್ದೆ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.
ಹಿಂದುತ್ವದ ಆಧಾರದ ಮೇಲೆ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾತಿಗಳನ್ನು ಒಡೆದು ಆಳುತ್ತಿದೆ. ಇಂತಹ ಯಾವುದೇ ಬೆಳವಣಿಗೆಗೆ ರಾಷ್ಟ್ರಪತಿಗಳು ಒಪ್ಪಬಾರದು. ಕೂಡಲೇ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಸಮದಾನಿಸಾಬ್ ಮೋಸಾ, ಸಲಿಂಸಾಬ್ ಗೋಗಿ, ವಾಹೀದ್ಸಾಬ್ ಅಗ್ರಕಲ್ಚರ್, ಜಿಲಾನಿಸಾಬ್ ಅಫಗಾನ್, ಡಾ.ಅಲೀಂ ಸಾಬ್, ಹಾಜಿ ಸಾಬ್ ಬಿಸ್ಮಿಲ್ಲಾ, ಮಂಜೂರ್ ಉಲ್ ಹಸನ್ ಜಾಮಿ, ಅಂಜುಮಿಯಾ ಎಚ್.ಕೆ., ಮಹ್ಮದ್ ಇಬ್ರಾಹಿಂ, ಖಮರ್ ಸಾಬ್, ಇನಾಯತ್ ಉಲ್ ರಹೆಮಾನ್, ಮಹ್ಮದ್ ಇಸಾಕ್ ಸಾಬ್, ಫರೀದ್ ಮೌಲಾನಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.