ಯಾದಗಿರಿ: ನಿರಂತರ ಬೆಲೆ ಕುಸಿತದಿಂದ ಕಂಗಾಲಾಗಿರುವ ಜಿಲ್ಲೆಯ ಹತ್ತಿ ಮತ್ತು ತೊಗರಿ ಬೆಳೆದ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಹಾಗೂ ಎರಡೂ ಬೆಳೆಗಳಿಗೂ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಬುಧವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಐಕೆಕೆಎಂಎಸ್: ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾವಣೆಗೊಂಡ ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ನಿರಂತರ ಬೆಲೆ ಕುಸಿತ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ದಿನ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏರಿಕೆ ಮತ್ತು ಸಬ್ಸಿಡಿ ಹಿಂಪಡೆದಿದ್ದರಿಂದ ಕೃಷಿ ಚಟುವಟಿಕೆ ಕೈಗೊಳ್ಳುವುದು ದುಬಾರಿಯಾಗಿದೆ. ಕೂಡಲೇ ಸರ್ಕಾರ ಪ್ರತಿ ಕ್ವಿಂಟಲ್ಗೆ ₹ 12 ಸಾವಿರ ಬೆಲೆ ನಿಗದಿ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಭೀಮರೆಡ್ಡಿ ಹಿರೆಬಾನರ್, ಉಪಾಧ್ಯಕ್ಷ ಜಮಾಲಸಾಬ ಹೆಡಗಿಮದ್ರ, ತಾಲ್ಲೂಕು ಘಟಕದ ಕಾರ್ಯದರ್ಶಿ ಸುಭಾಶ್ಚಂದ್ರ ಬಾವನೋರ, ಬಸವರಾ ಚಿಕ್ಕಬಾನರ್, ಕಾಶಪ್ಪ, ಸೋಮಲಿಂಗಪ್ಪ, ರವಿ ಬಳ್ಳಳ್ಳಿ, ಹಣಮಂತ, ಶಿವಪ್ಪ ಗೋಪಳ್ಳಿ, ಮಲ್ಲೇಶಿ, ಸೂರಪ್ಪ, ಭೀಮರಾಯ ಪ್ರತಿಭಟನೆಯಲ್ಲಿದ್ದರು.
ಕೆ.ಆರ್.ಎಸ್. ಮತ್ತು ರೈತ ಸಂಘ: ಬೆಂಬಲ ಬೆಲೆ ನಿಗದಿ ಮತ್ತು ಖರೀದಿ ಕೇಂದ್ರಗಳ ಸ್ಥಾಪನೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಕೆಆರ್ಎಸ್ ಮತ್ತು ರಾಜ್ಯ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ನಿಜಲಿಂಗಪ್ಪ ಪೂಜಾರಿ, ಬಸವರಾಜ ಠಾಣಾಗುಂದಿ, ಸಾಬಣ್ಣ ಜಮಾದಾರ, ಗ್ಯಾನಯ್ಯ ಮಂಜುಳಕರ, ಸುರೇಶ ಧರ್ಮಪುರ, ಉಮೇಶ, ಗುರುಶರಣು, ಮಲ್ಲಣ್ಣ ನೀಲಳ್ಳಿ, ಜಯವಂತ ತಾತಾಳಗೇರಾ, ಭೀಮರಾಯ ಎಲ್ಹೇರಿ ಸೇರಿದಂತ ಹಲವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.