ADVERTISEMENT

ಸುರಪುರ: ಟೆಂಡರ್ ರದ್ದು ಪಡಿಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 12:31 IST
Last Updated 20 ನವೆಂಬರ್ 2021, 12:31 IST
ಕರ್ನಾಳ ನಾಲಾ ಟೆಂಡರ್ ರದ್ದು ಪಡಿಸಬೇಕೆಂದು ಆಗ್ರಹಿಸಿ ಶನಿವಾರ ಸುರಪುದಲ್ಲಿ ಕರ್ನಾಟಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು
ಕರ್ನಾಳ ನಾಲಾ ಟೆಂಡರ್ ರದ್ದು ಪಡಿಸಬೇಕೆಂದು ಆಗ್ರಹಿಸಿ ಶನಿವಾರ ಸುರಪುದಲ್ಲಿ ಕರ್ನಾಟಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು   

ಸುರಪುರ: ತಾಲ್ಲೂಕಿನ ಕರ್ನಾಳ ನಾಲಾ ಟೆಂಡರ್ ರದ್ದು ಪಡಿಸಬೇಕೆಂದು ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಕರ್ನಾಟಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ಕರ್ನಾಳ ನಾಲಾ ಕಾಮಗಾರಿ ಕೆಬಿಜೆಎನ್‍ಎಲ್ ಭೀಮರಾಯನಗುಡಿ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಹಸನಾಪುರದಲ್ಲಿ ಉಪ ವಿಭಾಗ ಇದ್ದು ಅಲ್ಲಿಂದ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಆದರೆ ನಿಯಮ ಉಲ್ಲಂಘಿಸಿ ನಾರಾಯಣಪುರ ವಿಭಾಗದಿಂದ ಟೆಂಡರ್ ಕರೆಯಲಾಗಿದೆ’ ಎಂದು ದೂರಿದರು.

‘ಹಸನಾಪುರ ಉಪವಿಭಾಗಕ್ಕೆ ಬರುವ ಎಸ್‍ಸಿಪಿ, ಟಿಎಸ್‍ಪಿ ಕಾಮಗಾರಿಗಳನ್ನು ಹುಣಸಗಿ ವಿಭಾಗಕ್ಕೆ ಒಪ್ಪಿಸಲಾಗಿದೆ. ಇದು ನಿಯಮ ಬಾಹಿರವಾಗಿದೆ. ರಾಜಕೀಯ ಮುಖಂಡರಿಗೆ ಅನುಕೂಲ ಮಾಡಿಕೊಡಲು ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಉಪಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ, ‘ಟೆಂಡರ್ ರದ್ದು ಪಡಿಸಿ ಪುನಃ ಭೀಮರಾಯನಗುಡಿ ವಿಭಾಗದಿಂದ ಟೆಂಡರ್ ಕರಿಯಬೇಕು. ಎಸ್‍ಸಿಪಿ, ಟಿಎಸ್‍ಪಿ ಕಾಮಗಾರಿಗಳನ್ನು ಹಸನಾಪುರ ಉಪವಿಭಾಗಕ್ಕೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಭೀಮರಾಯ ಸಿಂಧಗೇರಿ ಮಾತನಾಡಿ, ‘ನಿರ್ಲಕ್ಷ್ಯ ವಹಿಸಿದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ನ.26 ರಂದು ಹಸನಾಪುರ ಉಪವಿಭಾಗ ಕಚೇರಿಯ ಎದುರು ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಕೆಬಿಜೆಎನ್‍ಎಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸಹ ಕಾರ್ಯದರ್ಶಿ ನಿಂಗಣ್ಣ ಗೋನಾಲ, ಶಿವಶಂಕರ ಹೊಸಮನಿ, ಗೋಪಾಲ ಬಾಗಲಕೋಟೆ, ಮಲ್ಲು ಜಾಲಿಬೆಂಚಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.