ಸುರಪುರ: ಶಹಾಪುರ ತಾಲ್ಲೂಕಿನ ಚಂದಾಪುರ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳ ಮೇಲಿನ ಕಲ್ಲು ತೂರಾಟ ಮತ್ತು ಸುರಪುರ ತಾಲ್ಲೂಕಿನ ಅಮಲಿಹಾಳ ಗ್ರಾಮದಲ್ಲಿ ಪರಿಶಿಷ್ಟರ ದೇಗುಲ ಪ್ರವೇಶದ ಗಲಭೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಸುನೀಲಕುಮಾರ ಮೂಲಿಮನಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ‘ಚಂದಾಪುರದಲ್ಲಿ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಗೋಗಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಒಬ್ಬರು ಮಾಹಿತಿ ಸೋರಿಕೆ ಮಾಡಿದ್ದು ಇದಕ್ಕೆ ಕಾರಣವೆಂದು ಅವರನ್ನು ಅಮಾನತ್ತು ಮಾಡಲಾಗಿದೆ. ಗೋಗಿ ಪಿಎಸ್ಐ ಅವರನ್ನು ಬ್ಲಾಕ್ಮೇಲ್ ಮಾಡಿದ ಈ ಆರೋಪಿಯನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
ಅಮಲಿಹಾಳ ಗ್ರಾಮದಲ್ಲಿ ಪೊಲೀಸರ ಸಮರ್ಪಗಾವಲಿನಲ್ಲಿ ಹೂವಿನಹಳ್ಳಿ ಪರಿಶಿಷ್ಟ ಜಾತಿಯವರು ದೇಗುಲ ಪ್ರವೇಶ ಮಾಡಿದ್ದರು. ಆದರೆ ಗ್ರಾಮದಲ್ಲಿ ಪರಿಸ್ಥಿತಿ ಇನ್ನು ತಿಳಿಯಾಗಿಲ್ಲ. ಕೆಲ ಸವರ್ಣಿಯ ಮುಖಂಡರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ. ಇದರಲ್ಲಿ ಭಾಗಿಯಾದ ಮುಖಂಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ನಿಂಗಣ್ಣ ಗೋನಾಲ, ರವಿ ಬೊಮ್ಮನಳ್ಳಿ, ಮಾನಪ್ಪ ಬಿಜಾಸಪುರ, ಜಟ್ಟೆಪ್ಪ ನಾಗರಾಳ, ಮರಿಲಿಂಗಪ್ಪ ನಾಟೇಕಾರ, ರೇವಣಸಿದ್ದಪ್ಪ ಮಾಲಗತ್ತಿ, ಮೂರ್ತಿ ಬೊಮ್ಮನಳ್ಳಿ, ಕಾಳಿಂಗಪ್ಪ ಕಲ್ಲದೇವನಹಳ್ಳಿ, ಆನಂದ ಹೆಮನೂರ, ಮರಿಲಿಂಗಪ್ಪ ದೇವಿಕೇರಿ, ಮಹೇಶ ಯಾದಗಿರಿ, ಪ್ರಕಾಶ ಆಲಾಳ, ಖಾಜಾ ಹುಸೇನ್ ಗುಡಗುಂಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.