ಯರಗೋಳ: ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜೋರಾದ ಮಳೆಯಿಂದಾಗಿ ಭಾನುವಾರ ರಾತ್ರಿ ದೂಡ್ಡ ಕೆರೆ (205 ಹೆಕ್ಟೇರ್ ವ್ಯಾಪ್ತಿ) ತುಂಬಿದ್ದು ಕೋಡಿ ಹರಿಯುತ್ತಿದೆ.
ಕೆರೆಯ ಹೆಚ್ಚುವರಿ ನೀರು ಗ್ರಾಮದ ಹಿರಿಕೇರಿ ಬ್ರಿಡ್ಜ್ ಮೇಲಿಂದ ಹರಿಯುತ್ತಿದ್ದು, ಯುವಕರು ನೀರಿನಲ್ಲಿ ಓಡಾಡಿದರು. ತುಂಬಿದ ಕೆರೆಯ ಸಂದರ್ಯ ಮತ್ತು ಕೆರೆ ಕೋಡಿಯಲ್ಲಿ ಬೀಳುತ್ತಿರುವ ನೀರಿನ ದೃಶ್ಯಾವಳಿಗಳನ್ನು ಚಿತ್ರಿಸಿಕೊಂಡು ತಮ್ಮ ಮೊಬೈಲ್ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಸಮೀಪದ ಹತ್ತಿಕುಣಿ ಮತ್ತು ಸೌದಾಗರ್ ಜಲಾಶಯಗಳು ತುಂಬಿದ್ದು ಹೆಚ್ಚುವರಿ ನೀರು ಚಾಮನಹಳ್ಳಿ ಮತ್ತು ಯಾದಗಿರಿ ಸಂಪರ್ಕಿಸುವ ಬ್ರಿಡ್ಜ್ ಮೇಲಿಂದ ಹರಿಯುತ್ತಿದೆ. ಬೈಕ್, ವಾಹನ ಸವಾರರು ಅಪಾಯವನ್ನು ಲೆಕ್ಕಿಸದೇ ಸಂಚರಿಸುತ್ತಿದ್ದಾರೆ.
‘ಅಲ್ಲಿಪುರ ಗ್ರಾಮದಲ್ಲಿ ಮಳೆಯಿಂದಾಗಿ ಗ್ರಾಮದ ನಡುವೆ ಇರುವ ಬ್ರಿಡ್ಜ್ ಮೇಲಿಂದ ನೀರು ಹರಿಯುತ್ತಿದ್ದು ಚರ್ಚ್ನಲ್ಲಿ ನೀರು ಹೋಗಿದೆ. ಗ್ರಾಮ ಪಂಚಾಯಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಲು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗಿದೆ’ ಎಂದು ಗ್ರಾಮದ ದುರ್ಗಪ್ಪ ಮತ್ತು ಸಾಬಣ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಬೆಳಗೇರಾ ಗ್ರಾಮದಲ್ಲಿ ಹಳ್ಳ ತುಂಬಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಪ್ರಕೃತಿದತ್ತ ಬೆಟ್ಟಗುಡ್ಡಗಳು ಹಚ್ಚಹಸಿರಾಗಿ ಕಾಣಿಸುತ್ತಿದ್ದು, ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ’ ಎಂದು ಗ್ರಾಮದ ಲಕ್ಷ್ಮಣ ಸಂತಸ ಹಂಚಿಕೊಂಡರು.
ಕೋಟಗೇರಾ ಗ್ರಾಮದಲ್ಲಿ ಬ್ರಿಡ್ಜ್ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದ್ದರೂ ಚಿಕ್ಕ ಮಕ್ಕಳು, ಯುವಕರು, ಬೈಕ್ ಸವಾರರು ಸಂಚರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.