ADVERTISEMENT

ಯಾದಗಿರಿ | ಮಳೆ: ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 15:37 IST
Last Updated 3 ಜೂನ್ 2024, 15:37 IST
ಯಾದಗಿರಿ ನಗರದ ಅಂಬಾಭವಾನಿ ದೇವಸ್ಥಾನದ ಹಿಂಭಾಗದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿರುವುದು
ಯಾದಗಿರಿ ನಗರದ ಅಂಬಾಭವಾನಿ ದೇವಸ್ಥಾನದ ಹಿಂಭಾಗದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿರುವುದು    

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಉತ್ತಮ ಮಳೆಯಾಗಿದೆ.

ಬೆಳಿಗ್ಗೆ ಹಾಲು, ಪತ್ರಿಕೆ ಹಾಕುವವರು, ಕಚೇರಿಗಳಿಗೆ ತೆರಳುವವರು ಜಿಟಿಜಿಟಿ ಮಳೆಯಲ್ಲಿ ಪರದಾಡಿದರು. ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 36.8ಮಿಲಿ ಮೀಟರ್‌ ಮಳೆ ದಾಖಲಾಗಿದೆ.

ನಗರ ಪ್ರದೇಶದಲ್ಲಿ 44.6 ಮಿಲಿ ಮೀಟರ್‌ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ವಿಶ್ವರಾಧ್ಯ ನಗರ, ಲುಂಬಿನಿ ವನ, ಅಂಬೇಡ್ಕರ್‌ ನಗರ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ದವಸ ಧಾನ್ಯಗಳು, ಗೃಹಪಯೋಗಿ ವಸ್ತುಗಳು ಮಳೆ ನೀರಿನಿಂದ ಆವೃತ್ತವಾಗಿದ್ದವು. ಲುಂಬಿನಿ ವನದ ಪಕ್ಕದ ಹೊಸಳ್ಳಿ ಕ್ರಾಸ್‌ ಸಮೀಪದ ಮನೆಗಳಿಗೆ ಚರಂಡಿ ನೀರಿನಿಂದ ನಿವಾಸಿಗಳು ನಿದ್ದೆಯಿಲ್ಲದೇ ಪರದಾಡಿದರು.

ADVERTISEMENT

ನಗರದ ಅಂಭಾಭವಾನಿ ದೇವಸ್ಥಾನದ ಹಿಂಭಾಗದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿತ್ತು. ಲಕ್ಷ್ಮೀ ನಗರದಿಂದ ಆರ್.ವಿ. ಶಾಲೆಗೆ ಹೋಗುವ ರಸ್ತೆ ಮಳೆ ನೀರಿನಿಂದ ಆವೃತವಾಗಿತ್ತು. ವಾಹನ ಸವಾರರು-ಸಾರ್ವಜನಿಕರು ಪರಪಾಡಿದರು. ಭೀಮಾ ಸೇತುವೆ ಮೇಲೆ ಮಳೆ ನೀರು ನಿಂತು ಸಂಚಾರಕ್ಕೆ ಅನಾನುಕೂಲವಾಯಿತು.

ವಿವಿಧೆಡೆ ಮಳೆ ವಿವರ: ಯಾದಗಿರಿ ತಾಲ್ಲೂಕಿನ ಬಳಿಚಕ್ರ, ಹತ್ತಿಕುಣಿ ಹೋಬಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಶಹಾಪುರ ತಾಲ್ಲೂಕಿನಲ್ಲಿ 37.6 ಮಿ.ಮೀ, ದೋರನಹಳ್ಳಿ 38.3, ಗೋಗಿ 45, ಹೈಯಾಳ ಬಿ 17.9, ಸುರಪುರ ತಾಲ್ಲೂಕಿನಲ್ಲಿ 26, ಕಕ್ಕೇರಾ 17.3, ಕೆಂಭಾವಿ 35.3, ಯಾದಗಿರಿ 44.6, ಬಳಿಚಕ್ರ 46.8, ಹತ್ತಿಕುಣಿ 46.8, ಸೈದಾಪುರ 31.1, ಗುರುಮಠಕಲ್‌ 43.5, ವಡಗೇರಾ 33.5, ಹುಣಸಗಿ 36.1, ಕೋಡೆಕಲ್‌ 45.3 ಮಿಲಿ ಮೀಟರ್‌ ಮಳೆಯಾಗಿದೆ.

ಯಾದಗಿರಿಯ ಲಕ್ಷ್ಮಿ ನಗರದಿಂದ ಆರ್.ವಿ ಶಾಲೆಗೆ ಹೋಗುವ ರಸ್ತೆ ಮಳೆ ನೀರಿನಿಂದ ಆವೃತವಾಗಿರುವುದು
ಯಾದಗಿರಿ ನಗರ ಹೊರವಲಯದ ಭೀಮಾ ಸೇತುವೆ ಮೇಲೆ ಮಳೆ ನೀರು ನಿಂತು ಸಂಚಾರಕ್ಕೆ ಅನಾನುಕೂಲವಾಯಿತು
ಯಾದಗಿರಿ ನಗರ ಹೊರವಲಯದ ಗುರುಸುಣಗಿ ರಸ್ತೆಯ ಪಕ್ಕದ ಹೊಲದಲ್ಲಿ ನೀರು ನಿಂತಿರುವುದು
ಯಾದಗಿರಿ ನಗರದ ಆರ್.ವಿ. ಶಾಲೆಯಲ್ಲಿ ಮಳೆ ನೀರು ಆವರಿಸಿತ್ತು

ವಿದ್ಯುತ್‌ ಕಣ್ಣಾ ಮುಚ್ಚಾಲೆ:

ಭಾನುವಾರ ರಾತ್ರಿಯಿಂದ ಮಳೆ ಸುರಿದಿದ್ದರಿಂದ ವಿದ್ಯುತ್‌ ಕಡಿತವಾಗಿ ನಗರ ನಿವಾಸಿಗಳು ಸೋಮವಾರ ಮಧ್ಯಾಹ್ನದವರೆಗೆ ಪರದಾಡಿದರು. ವಿದ್ಯುತ್‌ ಕಡಿತವಾಗಿದ್ದರಿಂದ ಸೋಮವಾರ ಬೆಳಿಗ್ಗೆ ಶಾಲಾ–ಕಾಲೇಜು ಕಚೇರಿಗಳಿಗೆ ತೆರಳುವವರು ತೊಂದರೆಪಟ್ಟರು. ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್‌ ಸಮಸ್ಯೆಯಾಗಿತ್ತು.

ಮನೆಗೆ ನುಗ್ಗಿದ ಮೋರಿ ನೀರು:

ಯಾದಗಿರಿ: ನಗರದ ಲುಂಬಿನಿ ವನದ ಪಕ್ಕದಲ್ಲಿರುವ ಕೃಷ್ಣಾ ದೇವಸ್ಥಾನ ಹತ್ತಿರ ಇರುವ ಮನೆ ಹಾಗೂ ಲಕ್ಷ್ಮೀ ನಗರದ ಅಂಭಾ ಭವಾನಿ ದೇವಸ್ಥಾನ ಪಕ್ಕದಲ್ಲಿ ಲುಂಬಿನ ವನದ ನೀರು ಮನಗಳಿಗೆ ನುಗ್ಗಿದೆ.  ರಾತ್ರಿ ಸುರಿದ ಮಳೆಯಿಂದ ಬೆಳಿಗ್ಗೆ ಮನೆಯಲ್ಲಿ ರಸ್ತೆ ಆವರಿಸಿಕೊಂಡ ಪರಿಣಾಮ ಮಕ್ಕಳು ಶಾಲೆಗೆ ಹೋಗಲು ಹಾಗೂ ವಾಹನ ಸಂಚಾರ ಮಾಡಲು ಸಾರ್ವಜನಿಕರು ಪರದಾಡಿದ ಪರಿಸ್ಥಿತಿ ನಿರ್ಮಾಣವಾಯಿತು. ಮಳೆಯ ನೀರು ಪ್ರತಿ ಬಾರಿ ಮನೆ-ರಸ್ತೆಯ ಮೇಲೆ ಬರುತ್ತಿರುವ ಬೇಸತ್ತ ಏರಿಯಾದ ಜನರು ನಗರಸಭೆ ಹೋಗಿ ಸಮಸ್ಯೆ ತೋಡಿಕೊಂಡರು. ‘ಕೆರೆಗೆ ರಾಜ ಕಾಲುವೆ ನಿರ್ಮಾಣ ಮಾಡಿ ಮಳೆ ನೀರನ್ನು ಹಳ್ಳಕ್ಕೆ ಬಿಟ್ಟು ನಮಗೆ ಶಾಶ್ವತ ಪರಿಹಾರ ಮಾಡಬೇಕು’ ಎಂದು ಏರಿಯಾದ ಬನ್ನಪ್ಪ ಮಾಸ್ಟರ್ ಶಿವಪ್ಪ ಸಾಹುಕಾರ ಮಹಾದೇವಮ್ಮ ರಾಜೂಗೌಡ ಒತ್ತಾಯಿಸಿದ್ದಾರೆ. ಸುದ್ದಿ ತಿಳಿದ್ದು ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತರಡ್ಡಿ ಹಾಗೂ ಸಿಬ್ಬಂದಿಯೊಂದಿಗೆ ಭೇಟಿ ಮಾಡಿ ಜೆಸಿಬಿಯಿಂದ ಮಳೆ ನೀರು ಹೋಗುವಂತೆ ಮಾಡಿದರು. ಆದರೂ ಶಾಶ್ವತ ಪರಿಹಾರ ಮಾಡಬೇಕೆಂದು ಏರಿಯಾದ ನಿವಾಸಿಗಳ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.