ಯಾದಗಿರಿ: ಮುಸ್ಲಿಮರ ಪವಿತ್ರ ಹಬ್ಬ ಇದ್–ಉಲ್–ಫಿತ್ರ್ಗೆ ಕ್ಷಣಗಣನೆ ಆರಂಭವಾಗಿದ್ದು, ಕೊರೊನಾ ಕಾರಣದಿಂದ ಎಲ್ಲೆಡೆ ಸರಳವಾಗಿ ಆಚರಿಸಲಾಗುತ್ತಿದೆ.
ಈ ಬಾರಿ ಮನೆಯಲ್ಲಿಯೇ ಸರಳವಾಗಿ ಹಬ್ಬವನ್ನು ಆಚರಿಸುತ್ತೇವೆ ಎನ್ನುವುದು ಬಹುತೇಕ ಮುಸ್ಲಿಮರ ಅಭಿಪ್ರಾಯವಾಗಿದೆ. ಮೊದಲೆಲ್ಲ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಸೇರಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ನಂತರ ಮನೆಗೆ ಬಂಧು–ಬಳಗದವರನ್ನು ಕರೆದು ಹಬ್ಬದೂಟ ಸವಿಯುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿಯಲ್ಲಿ ಸರ್ಕಾರ ಮಸೀದಿ, ದರ್ಗಾಗಳಿಗೆ ತೆರಳದಂತೆ ಕಟ್ಟಪ್ಪಣೆ ನೀಡಿದೆ. ಹೀಗಾಗಿ ಮನೆಗಳಲ್ಲೆ ಆಚರಿಸುಲಾಗುತ್ತಿದೆ.
‘ಮನೆಯಲ್ಲಿ ಹಬ್ಬದ ಆಚರಣೆ ಇರಲಿದೆ. ಬೇರೆಯವರ ಮನೆಗೆ ಹೋಗಲು ಅಂಜುತ್ತಿದ್ದಾರೆ. ಹೊಸ ಬಟ್ಟೆ ಖರೀದಿಯೂ ಇಲ್ಲ. ಮಸೀದಿಯಲ್ಲಿ ಮಾತ್ರ ಮೂವರಿಗೆ ಅನುಮತಿ ನೀಡಿದ್ದರಿಂದ ಅವರು ಮಾತ್ರ ಮಾಡುತ್ತಿದ್ದಾರೆ’ ಎನ್ನುತ್ತಾರೆ ನಗರ ನಿವಾಸಿ ಕಾಸಿಂಅಲಿ ಪಟ್ಟೇದಾರ ಹೇಳುತ್ತಾರೆ.
‘ಕೊರೊನಾ ಭೀತಿಯಿಂದ ಹಬ್ಬದ ಸಂಭ್ರಮವೇ ಇಲ್ಲದಂತಾಗಿದೆ. ಹೀಗಾಗಿ ಮನೆಯಲ್ಲಿ ನಮಾಜ್ ಮಾಡಿ ಉಪವಾಸ ವ್ರತಗೊಳಿಸುತ್ತೇವೆ. ಕೊರೊನಾದಿಂದ ಪೀಡಿತರಾದವರು ಬೇಗ ಗುಣವಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ’ ಎನ್ನುತ್ತಾರೆ ಅವರು.
ಕೈಕುಲುಕುವುದು ಬೇಡ. ದೂರದಿಂದಲೇ ಶುಭಾಷಯ ವಿನಿಮಯ ಮಾಡಿ. ಜೊತೆಗೆ ಹೊರಗಡೆ ಎಲ್ಲಿಯೂ ತೆರಳದೇ ಮನೆಯಲ್ಲಿ ನಮಾಜ್ ಮಾಡಿ
ಡಾ.ರಫೀಕ್ ಸೌದಾಗರ್, ಕಲ್ಯಾಣ ಕರ್ನಾಟಕ ಪಾಲಿಟಿಕಲ್ ಫೋರಂ ಜಿಲ್ಲಾಧ್ಯಕ್ಷ
ಮನೆಯಲ್ಲಿ ನಮಾಜ್ ಮಾಡಬೇಕು. ಧರ್ಮಗುರುಗಳು, ಸರ್ಕಾರದ ಆದೇಶ ಪಾಲನೆಗೆ ಹೆಚ್ಚು ಒತ್ತು ನೀಡಿ. ಸರಳವಾಗಿ ಹಬ್ಬ ಆಚರಿಸಿ
ಲಾಯಕ್ ಬದಲ್ ಹುಸೇನಿ, ಬೈತುಲ್ ಮಾಲ್ ಸಮಿತಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.