ಅತ್ಯಾಚಾರ
ಸಾಂದರ್ಭಿಕ ಚಿತ್ರ
ಯಾದಗಿರಿ: ಸುರಪುರ ತಾಲ್ಲೂಕಿನ ಗ್ರಾಮವೊಂದರ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ವಿವಾಹಿತನ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದೆ.
ಬಾಲಕಿ ಮನೆಯ ಪಕ್ಕದ ಶಿವಪ್ಪ ವಿರುದ್ಧ ಬಿಎನ್ಎಸ್ ಸೆಕ್ಷನ್ 65(1), 351 (2) ಜೊತೆಗೆ ಪೋಕ್ಸೊ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿ ಮತ್ತು ತಂದೆ ಬೆಂಗಳೂರಿಗೆ ವಲಸೆ ಹೋಗಿ ಅಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. 9ನೇ ತರಗತಿ ಓದುತ್ತಿರುವ ಬಾಲಕಿಯು ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿಗೆ ಪೋಷಕರ ಬಳಿಗೆ ಹೋಗಿದ್ದಳು. ಶಾಲೆಗೆ ಹೋಗಲೆಂದು ಮರಳಿ ಸ್ವಗ್ರಾಮಕ್ಕೆ ಬಂದಳು. ಮನೆಯ ಪಕ್ಕದಲ್ಲಿಯೇ ಸಂಬಂಧಿಕರು ಇದ್ದಿದ್ದರಿಂದ ಬಾಲಕಿಯು ತಾನೇ ಅಡುಗೆ ಮಾಡಿಕೊಂಡು ಶಾಲೆಗೆ ಹೋಗಿ– ಬರುತ್ತಿದ್ದಳು ಎಂದು ಹೇಳಿದ್ದಾರೆ.
ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದಿದ್ದನ್ನು ನೋಡಿದ ಆರೋಪಿಯು ರಾತ್ರಿಯ ವೇಳೆ ಆಕೆಯು ಮನೆಗೆ ನುಗ್ಗಿದ್ದಾನೆ. ನಾನು ನಿನ್ನನ್ನು ಇಷ್ಟ ಪಡುತ್ತೇನೆ ಎಂದು ಬಲತ್ಕಾರಕ್ಕೆ ಮುಂದಾದ. ಬಾಲಕಿಯ ಅದಕ್ಕೆ ವಿರೋಧಿಸಿ, ನಾನು ಚಿಕ್ಕವಳು, ನಿನಗೆ ಮದುವೆಯಾಗಿದೆ ಎಂದರೂ ಕೇಳಲಿಲ್ಲ. ಬಾಲಕಿಯ ವಿರುದ್ಧವನ್ನು ಲೆಕ್ಕಿಸದೆ ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಪೋಷಕರಿಗೂ ಹೇಳದಂತೆ ಜೀವ ಬೆದರಿಕೆಯೂ ಹಾಕಿದ್ದು, ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಪೋಷಕರ ಬಳಿ ಬೆಂಗಳೂರಿಗೆ ತೆರಳಿದ್ದ ಬಾಲಕಿಗೆ ಜ್ವರ ಬಂದಿತ್ತು. ಆಸ್ಪತ್ರೆಗೆ ಕರೆದೊಯ್ಸು ತಪಾಸಣೆ ಮಾಡಿದಾಗ ಬಾಲಕಿಯು ಎರಡು ತಿಂಗಳ ಗರ್ಭಿಣಿ ಆಗಿರುವುದು ಗೊತ್ತಾಗಿದೆ. ಬಾಲಕಿಯನ್ನು ವಿಚಾರಿಸಿದಾಗ ಆರೋಪಿ ಶಿವಪ್ಪ ಅತ್ಯಾಚಾರ ಎಸಗಿ, ಜೀವ ಬೆದರಿಕೆ ಹಾಕಿದ್ದ ಎಂಬುದನ್ನು ಪೋಷಕರಿಗೆ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾದಗಿರಿ ತಾಲ್ಲೂಕಿನ ಕರಣಿಗಿ– ಜೈಗ್ರಾಂ ನಡುವಿನ ರಸ್ತೆಯಲ್ಲಿ ಕೆಕೆಆರ್ಟಿಸಿ ಬಸ್ ಮತ್ತು ಆಟೊ ನಡುವೆ ಡಿಕ್ಕಿ ಸಂಭವಿಸಿದ್ದು, ಆಟೊ ಚಾಲಕ ಗಾಯಗೊಂಡಿದ್ದಾರೆ.
ತಾಲ್ಲೂಕಿನ ರಾಮಸಮುದ್ರ ನಿವಾಸಿ ಆಟೊ ಚಾಲಕ ಬಂಗಾರಪ್ಪ ದೇವಿಂದ್ರಪ್ಪ ಅವರು ಗಾಯಗೊಂಡಿದ್ದಾರೆ. ಬಸ್ ಚಾಲಕ ಮರೆಪ್ಪ ಹಣಮಂತ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಗ್ರಾಂ ಕಡೆಯಿಂದ ಆಟೊ ಹಾಗೂ ಕರಣಿಗಿ ಕಡೆಯಿಂದ ಬಸ್ ವೇಗವಾಗಿ ಚಲಾಯಿಸಿಕೊಂಡ ಬಂದ ಚಾಲಕರು, ಅವುಗಳನ್ನು ನಿಯಂತ್ರಿಸಲು ಆಗದೆ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾದವು. ಡಿಕ್ಕಿಯಿಂದಾಗಿ ಆಟೊ ಜಖಂ ಗೊಂಡಿದ್ದು, ಅದರಲ್ಲಿದ್ದ ಚಾಲಕ ಬಂಗಾರೆಪ್ಪ ಅವರ ಕಾಲಿಗೆ ಗಾಯವಾಗಿದೆ ಎಂದು ಪೊಲೀಸು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.