
ಸೈದಾಪುರ: ‘ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ರೈತ ಬಾಂಧವರು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು’ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ವಲಯಾಧ್ಯಕ್ಷ ರವಿಂದ್ರಕುಮಾರ ಕಡೇಚೂರು ಮನವಿ ಮಾಡಿದರು.
ಪಟ್ಟಣದಲ್ಲಿ ಕುರುಬ ಸಮಾಜದ ವತಿಯಿಂದ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
‘ಸಮೀಪದ ಬಾಲಛೇಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿ ಕಾರ್ಯಕ್ರಮವು ಫೆ. 3ರಂದು ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಅಲ್ಲದೆ ಬೆಳಿಗ್ಗೆ ಗ್ರಾಮದ ಭೀರಪ್ಪ ಗುಡಿಯಿಂದ ಕನಕವೃತ್ತದವರೆಗೆ ಕಳಸ-ಕುಂಬದೊಂದಿಗೆ ಗಣ್ಯರು, ಬಾಲಛೇಡ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಮೆರವಣಿಗೆ ಮೂಲಕ ಸಾಗಿ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸುವುರು’ ಎಂದರು.
‘ಈ ಕಾರ್ಯಕ್ರಮದಲ್ಲಿ ಅಗತೀರ್ಥ ಸರೂರ ಶಾಖಾಮಠದ ಹಾಲುಮತ ಗುರುಪೀಠದ ರೇವಣಸಿದ್ಧೇಶ್ವರ ಸ್ವಾಮೀಜಿ, ಕ್ಷೀರಲಿಂಗಶ್ವೇರ ಸ್ವಾಮೀಜಿ, ಚೇಗುಂಟಾ, ತಿಂಥಣಿ ಬ್ರಿಡ್ಜ್ನ ಕನಕ ಗುರುಪೀಠ ಕಾಗಿನೆಲೆ ಮಠದ ಲಿಂಗಬೀರದೇವರು, ಜಗಲಿಂಗೇಶ್ವರ ಸ್ವಾಮೀಜಿ, ಸೋಮೇಶ್ವರಾನಂದ ಸ್ವಾಮೀಜಿ, ಶಾಸಕ ಶರಣಗೌಡ ಕಂದಕೂರ, ಸಮಾಜದ ರಾಜ್ಯ ಉಪಾಧ್ಯಕ್ಷ ನಿಖಿಲ್.ವಿ ಶಂಕರ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಹಿರಿಯ ಮುಖಂಡ ಭೀಮಶಪ್ಪ ಜೇಗರ್, ಕೈಲಾಸ್ ಆಸ್ಪಲ್ಲಿ, ಮಹಾದೇವ ಮುನಗಾಲ, ಸಿದ್ದು ಪೂಜಾರಿ, ವಿಜಯ ಕಂದಳ್ಳಿ, ಮಹೇಶ ಜೇಗರ್, ಪುಂಡಲಿಕ, ಬೀರಲಿಂಗ ಕಿಲ್ಲನಕೇರಾ, ಚಂದ್ರಶೇಖರ್ ಹೊಸಳ್ಳೋರ್, ತಾಯಪ್ಪ ಗಡದೋರ್, ಸಾಬಣ್ಣಗೌಡ್ರ್ ಬಾಲಛೇಡ್ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.