ಶಹಾಪುರ: ಸಂಕ್ರಾಂತಿಯ ದಿನ ನಡೆಯುವ ಭೀಮರಾಯನಗುಡಿಯ ಬಲಭೀಮೇಶ್ವರ ಮತ್ತು ದಿಗ್ಗಿ ಸಂಗಮೇಶ್ವರ ದೇವರ ಗಂಗಸ್ನಾನ ಮೆರವಣಿಗೆ, ಜೋಡು ಪಲ್ಲಕ್ಕಿ ಉತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ತಾಲ್ಲೂಕು ಆಡಳಿತ ರದ್ದುಪಡಿಸಿದೆ.
ಮಕರ ಸಂಕ್ರಾತಿ ದಿನ ಬೆಳಿಗ್ಗೆ ತಾಲ್ಲೂಕಿನ ಹುರಸಗುಂಡಗಿ ಗ್ರಾಮದಭೀಮಾ ನದಿಗೆ ಗಂಗಾಸ್ನಾನಕ್ಕೆ ತೆರಳಲಾಗುತ್ತಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಜೆ ಬಲಭೀಮೇಶ್ವರ ಹಾಗೂ ಸಂಗಮೇಶ್ವರ ಅವರ ಜೋಡು ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಆಗ ರಾತ್ರಿ ಇಡೀ ಪಂಜಿನ ಮೆರವಣಿಗೆ ನೋಡುವುದು ಭಕ್ತರಿಗೆ ಸಂಭ್ರಮವಾಗುತ್ತಿತ್ತು.
ಅದರೆ ಸರ್ಕಾರ ನಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಜಾತ್ರೆ, ಉತ್ಸವ ರದ್ದುಪಡಿಸಿದೆ. ಒಲ್ಲದ ಮನಸ್ಸಿನಿಂದ ನಾವೆಲ್ಲರೂ ಆದೇಶವನ್ನು ಅನಿವಾರ್ಯವಾಗಿ ಸ್ವೀಕರಿಸುವಂತೆ ಆಗಿದೆ ಎನ್ನುತ್ತಾರೆ ಭಕ್ತರು. ಜಾತ್ರೆ ರದ್ದುಪಡಿಸಿದ ಕಾರಣ ಅಂಗಡಿ, ಮುಂಗಟ್ಟುಗಳನ್ನು ಹಾಕುವಂತಿಲ್ಲ. ಆದ್ದರಿಂದ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ.
ಸಂಕ್ರಾಂತಿ ಸ್ನಾನ: ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಸಂಕ್ರಾಂತಿ ಅಂಗವಾಗಿ ಜನ ಪುಣ್ಯ ಸ್ನಾನ ಮಾಡಿದರು. ಕೋವಿಡ್ ನಿಯಮ ಪಾಲನೆಯಾಗಲಿಲ್ಲ. ನದಿಯ ಸೇತುವೆ ಕೆಳಗೆ ಕೆಲವರು ಜೂಜಾಟದಲ್ಲಿ ತೊಡಗಿದ್ದರು. ಸಂಜೆ ಪೊಲೀಸರು ಬಂದು ಗುಂಪು ಚದುರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.