ಸಾವೂರು (ಸೈದಾಪುರ): ಸಮೀಪದ ಸಾವೂರ ಗ್ರಾಮದ ದೊಡ್ಡಪ್ಪತಾತ ದೇವಸ್ಥಾನದಲ್ಲಿ ದೊಡ್ಡಪ್ಪ ತಾತ ಶಿವಶರಣರ ರಥೋತ್ಸವವು ಬುಧವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.
ದೊಡ್ಡಪ್ಪತಾತಾ ಮೂರ್ತಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ನಂದಿಕೋಲು ಮತ್ತು ಪುರವಂತರ ಸೇವೆ ಮಾಡಿದರು. ಮಂದಿರದಿಂದ ದೊಡ್ಡಪ್ಪತಾತಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ದೇವಸ್ಥಾನ ಹಾಗೂ ಭವ್ಯ ರಥದ ಸುತ್ತಲೂ ಪ್ರದಕ್ಷಣೆ ಹಾಕಲಾಯಿತು.
ರಥದಲ್ಲಿ ಮೂರ್ತಿಯನ್ನು ಇಟ್ಟು, ಸಂಜೆ 6ರ ಸುಮಾರು ವೀರಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ದಾರಿಯುದ್ದಕ್ಕೂ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಥವನ್ನು ಬಣ್ಣ ಬಣ್ಣದ ಹೂಗಳು, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.
ಮಲ್ಹಾರ, ಹೆಗ್ಗಣಗೇರಾ, ಲಿಂಗೇರಿ, ಕೌಳೂರು, ಮುಷ್ಠೂರು, ಕ್ಯಾತ್ನಾಳ, ಆನೂರು (ಬಿ), ಆನೂರು (ಕೆ), ಬೆಳಗುಂದಿ, ಭೀಮನಳ್ಳಿ, ದುಪ್ಪಲ್ಲಿ, ಬದ್ದೇಪಲ್ಲಿ, ಕೂಡ್ಲೂರು, ನಾಗರಬಂಡಿ, ಗೌಡಗೇರಾ, ಮುನಗಾಲ, ಗೊಂದಡಿಗಿ, ಸೈದಾಪುರ ಸೇರಿದಂತೆ ನೆರೆಯ ರಾಯಚೂರು, ಕಲಬುರ್ಗಿ, ವಿಜಯಪುರ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.