
ವಡಗೇರಾ: ‘ಪರೋಪಕಾರ ಮತ್ತು ಪುಣ್ಯ ಕಾರ್ಯಗಳಿಂದ ಮಾತ್ರ ಮನುಷ್ಯನ ಜನ್ಮ ಸಾರ್ಥಕ ಮತ್ತು ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ’ ಎಂದು ಗುಳೇದಗುಡ್ಡ ಮರಡಿ ಸಂಸ್ಥಾನ ಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಮಠದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ತಿಕ ಮಾಸದ ದೀಪೋತ್ಸವ ಹಾಗೂ 100ನೇ ಶಿವಾನುಭವ ಚಿಂತನಾಗೋಷ್ಠಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ದೀಪದ ಬೆಳಕು ಮನುಷ್ಯನಲ್ಲಿರುವ ಅಜ್ಞಾನವೆಂಬ ಕತ್ತಲನ್ನು ತೊಲಗಿಸುತ್ತದೆ. ದೀಪವು ಮನುಷ್ಯನ ವೃದ್ಧಿಯ ಸಂಕೇತವಾಗಿದೆ. ಕರುಣೇಶ್ವರ ಶ್ರೀಗಳು ಕೂಡ ಸಂಗಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಮುಂದಿನ ದಿನಗಳಲ್ಲಿ ಈ ಪುಣ್ಯಕ್ಷೇತ್ರವು ಕೂಡಲಸಂಗಮದಂತೆ ಅಭಿವೃದ್ಧಿ ಹೊಂದಲಿದೆ. ಅಭಿವೃದ್ಧಿ ಕೆಲಸದಲ್ಲಿ ಶ್ರೀಗಳೊಂದಿಗೆ ಭಕ್ತರು ಕೈಜೋಡಿಸಬೇಕು’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೃಷ್ಣವೇಣಿ ಭೀಮಾ ಸಂಗಮದ ಕರುಣೆಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ದೀಪವು ಮನೆ ಮನವನ್ನು ಬೆಳಗುತ್ತದೆ. ನಮ್ಮ ಆತ್ಮಗಳನ್ನು ಕೆಟ್ಟ ಮಾರ್ಗದಿಂದ ಒಳ್ಳೆಯ ಮಾರ್ಗದಡೆಗೆ ಹೋಗಲು ಸಹಕರಿಸುತ್ತದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡುವದರ ಜತೆಗೆ ಮಠ ಮಂದಿರಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಅವಶ್ಯಕವಾಗಿದೆ ’ ಎಂದರು.
ವೇದಮೂರ್ತಿ ಶಿವರುದ್ರಯ್ಯ ಶಾಸ್ತ್ರಿ ಕಲಬುರ್ಗಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಶ್ರೀಗಳ ಸಾನ್ನಿಧ್ಯದಲ್ಲಿ ಕೃಷ್ಣೆ ಭೀಮೆಗೆ ದೀಪಾರತಿ ನೆರವೇರಿಸಲಾಯಿತು.
ಇದೇ ಸಮಯದಲ್ಲಿ ಎಸ್.ಎಸ್ ಫೌಂಡೇಶನ್ನ ಸುಭಾಶ ಪಾಟೀಲ್ ಬೀದರ್ ಅವರು ಮಾದಕ ವಸ್ತುಗಳ ಹಾಗೂ ನಶಾ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪ ಗೌಡ ಕಾರಡ್ಡಿ ಮಲ್ಹಾರ, ರಾಮಕೃಷ್ಣ ಆಶ್ರಮದವೇಣುಗೋಪಾಲ ಗುರೂಜಿ, ವೇದಮೂರ್ತಿ ವೀರಭದ್ರಯ್ಯ ಸ್ವಾಮಿ ದೇವಸುಗೂರ, ಮಹೇಶ್ ರೆಡ್ಡಿ ಮುದ್ನಾಳ, ಶಿವರಾಜಪ್ಪ ಗೌಡ ಬೆಂಡೆಬೆಂಬಳಿ, ಸಿದ್ದಲಿಂಗರೆಡ್ಡಿ ಗೌಡ ಕಲಬುರಗಿ, ಬಸವರಾಜ ಸೇಡಂ, ರವಿ ಪಾಟೀಲ್ ಮನಗೂಳಿ, ಅನ್ನಪೂರ್ಣಮ್ಮ ಯಾದಗಿರಿ, ಗೌರಿಶಂಕರ ಹಿರೇಮಠ, ಸಿದ್ದಯ್ಯ ಸ್ವಾಮಿ ಬೆಂಡಬೆಂಬಳಿ, ಶಿವು ಗೌಡ ಗುರ್ಜಾಲ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಮಹಿಳೆಯರು ಸಂಗಮೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕ ಮೌನೇಶ ವಿಶ್ವಕರ್ಮ ಶಿವಪೂರ ನಿರೂಪಿಸಿ ವಂದಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.