ಕೆಂಭಾವಿ: ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಾಡಲು ಈಗಾಗಲೇ ಸಂಬಂಧಪಟ್ಟವರಿಗೆ ಮನವಿಯನ್ನು ನೀಡಲಾಗಿದೆ. ಈ ಭಾಗದ ಶಾಸಕರು ಸಹ ಈ ಕುರಿತಾಗಿ ಹೈಕಮಾಂಡ್ ಮಟ್ಟದಲ್ಲಿ ಒತ್ತಾಯ ಮಾಡಬೇಕು ಎಂದು ಕಲಬುರ್ಗಿ– ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ತಿಳಿಸಿದರು.
ಪಟ್ಟಣದ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ– 2ರಿಂದ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಿದರೆ ಅಂಥ ರೈತರಿಗೆ ಮುಂದಿನ ಅವಧಿಗೆ ಸಾಲದ ಮೊತ್ತವನ್ನು ದ್ವಿಗುಣಗೊ ಳಿಸಲಾಗುವುದು. ಮುಂಬರುವ ದಿನಗಳಲ್ಲಿ ರೈತರು ಹೊಂದಿದ ಭೂಮಿಯ ಆಧಾರದಲ್ಲಿ ಸಾಲ ನೀಡಲಾಗುವುದು. ಕೇವಲ ಶೇ 3ರ ಬಡ್ಡಿ ದರದಲ್ಲಿ ₹3ರಿಂದ 10 ಲಕ್ಷ ಸಾಲ ವಿತರಿಸಲಾಗುವುದು ಎಂದರು.
ಹುಣಸಗಿಯಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರದು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಶಾಸಕ ಶರಣಬಸಪ್ಪಗೌಡ ದರ್ಶನಾ ಪುರ ಮಾತನಾಡಿ, ಕೆಂಭಾವಿ ವಲಯದ ಸುಮಾರು 1,700 ರೈತರಿಗೆ ₹4.19 ಕೋಟಿ ಸಾಲ ಬಿಡುಗಡೆಗೊಳಿಸಲಾಗಿದೆ. ಕೃಷಿ ಪತ್ತಿನ ಸಂಘಗಳನ್ನು ಬೆಳೆಸಬೇಕೆಂದರೆ ರೈತರು ಸಂಘಗಳಲ್ಲೆ ಹೆಚ್ಚಿನ ವ್ಯವಹಾರ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿಡುವಂತೆ ಇಲ್ಲಿಯೂ ಠೇವಣಿ ಇಡಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇಫ್ಕೋ ನಿರ್ದೇಶಕ ವೈ.ಟಿ.ಪಾಟೀಲ, ಮರಿಗೌಡ ಹುಲಕಲ್, ಸಿದ್ದನಗೌಡ ಪೊಲೀಸ್ ಪಾಟೀಲ, ರಾಜಾ ಮುಕುಂದ ನಾಯಕ, ವಾಮನರಾವ ದೇಶಪಾಂಡೆ, ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಯಾಳಗಿ ಇದ್ದರು.
ಸಾಲ ವಿತರಣೆ ವಿವರ: ಮಾಲಗತ್ತಿಯ ಪಿಕೆಪಿಎಸ್ನ 130 ರೈತರಿಗೆ ₹32.50 ಲಕ್ಷ ಹಾಗೂ ಹೆಗ್ಗನದೊಡ್ಡಿ ಪಿಕೆಪಿಎಸ್ನ 140 ರೈತರಿಗೆ ₹35 ಲಕ್ಷ ಬಡ್ಡಿ ರಹಿತ ಸಾಲ ನೀಡಲಾಗಿದೆ. ಕೆಂಭಾವಿಯ 181 ರೈತರಿಗೆ ₹45.25 ಲಕ್ಷ, ಯಾಳಗಿಯ 245 ರೈತರಿಗೆ ₹57 ಲಕ್ಷ, ಮಲ್ಲಾ (ಬಿ) 226 ರೈತರಿಗೆ ₹56 ಲಕ್ಷ, ನಗನೂರಿನ 150 ರೈತರಿಗೆ ₹37.50 ಲಕ್ಷ, ಪರಸನಹಳ್ಳಿಯ 130 ರೈತರಿಗೆ ₹32.50 ಲಕ್ಷ, ಏವೂರಿನ 157 ರೈತರಿಗೆ ₹39.25 ಲಕ್ಷ, ಮುನೀರ್ ಬೊಮ್ಮನಹಳ್ಳಿಯ 230 ರೈತರಿಗೆ ₹51 ಲಕ್ಷ ಸಾಲ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.