ADVERTISEMENT

ಸಪ್ತ ತೀರ್ಥಗಳಲ್ಲಿ ಜೀವಕಳೆ

ಪವನ ಕುಲಕರ್ಣಿ
Published 12 ಸೆಪ್ಟೆಂಬರ್ 2021, 3:43 IST
Last Updated 12 ಸೆಪ್ಟೆಂಬರ್ 2021, 3:43 IST
ಕೆಂಭಾವಿ ಸಮೀಪ ಮುದನೂರು ಗ್ರಾಮದಲ್ಲಿನ ರಾಮತೀರ್ಥ
ಕೆಂಭಾವಿ ಸಮೀಪ ಮುದನೂರು ಗ್ರಾಮದಲ್ಲಿನ ರಾಮತೀರ್ಥ   

ಕೆಂಭಾವಿ: ಇಲ್ಲಿನ ಐತಿಹಾಸಿಕ ಸಪ್ತ ತೀರ್ಥಗಳು ಎಂಥ ಕಡು ಬೇಸಿಗೆಯಲ್ಲೂ ಎಂದೂ ಬತ್ತದೇ ಅಚ್ಚರಿ ಮೂಡಿಸುತ್ತಿವೆ. ಅವುಗಳ ತಣ್ಣನೆಯ, ರುಚಿಯಾದ ನೀರು ಇರುವುದು ವಿಶೇಷವಾಗಿದೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನೀರು ಹಾಹಾಕಾರ ಉಂಟಾಗುತ್ತದೆ. ಜಲಮೂಲಗಳು ಬತ್ತಿ ಹೋಗುತ್ತವೆ. ಆದರೆ ಮುದನೂರು ಗ್ರಾಮದಲ್ಲಿನ ಪುಷ್ಕರಣಿಗಳು ಮಾತ್ರ ಅದಕ್ಕೆ ಅಪವಾದ ನಿಲ್ಲುತ್ತವೆ. ಬೇಸಿಗೆಯಲ್ಲಿ ಪುಷ್ಕರಣಿಗಳು ನೀರಿನಿಂದ ತುಂಬಿರುತ್ತವೆ.

ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ನಿತ್ಯ ರಾಮನಥನನ್ನು (ರಾಮನಾಥ ಎಂದರೆ ಶಿವ) ಪೂಜಿಸಿ, ಭಕ್ತಿ ಸಮರ್ಪಿಸಲು ದೂರದ ಭೀಮಾ ನದಿಯಿಂದ ನೀರು ತರುತ್ತಿದ್ದ. ಪ್ರತಿ ನಿತ್ಯವೂ ಇಲ್ಲಿಗೆ ಬರುವುದು ಬೇಡ ಎಂದು ಶಿವ ಪ್ರತ್ಯಕ್ಷನಾಗಿ ಮುದನೂರಿನಲ್ಲಿಯೇ ನೀರಿನ ಸೆಲೆಯನ್ನು ನಿರ್ಮಾಣ ಮಾಡಿದನು ಎಂಬುದು ಗ್ರಾಮಸ್ಥರ ಹೇಳಿಕೆ.

ADVERTISEMENT

ಸಪ್ತ ತೀರ್ಥಗಳು: ಪಾಂಡವ ತೀರ್ಥ, ರಾಮತೀರ್ಥ, ಲಕ್ಷ್ಮಣ ತೀರ್ಥ, ಮರಳು ತೀರ್ಥ, ಹಾಲು ತೀರ್ಥ, ಸಕ್ಕರೆ ತೀರ್ಥ ಮತ್ತು ಸಂಗಮ ತೀರ್ಥ ಎಂಬ ಏಳು ತೀರ್ಥಗಳಿಂದ ಮುದನೂರು ಪ್ರಸಿದ್ಧಿ ಪಡೆದಿದೆ. ಇಲ್ಲಿನ ಸಪ್ತ ತೀರ್ಥಗಳಲ್ಲಿ ಒಂದು ತೀರ್ಥದಲ್ಲಿ ಹಾಲಿನಂತೆ ನೀರು ಇರುವುದರಿಂದ ಅದಕ್ಕೆ ಹಾಲು ತೀರ್ಥ, ಸಕ್ಕರೆಯಂತೆ ನೀರು ಸಿಹಿಯಾಗಿರುವುದರಿಂದ ಅದಕ್ಕೆ ಸಕ್ಕರೆ ತೀರ್ಥವೆಂದು ಹೆಸರಿಸಲಾಗಿದೆ.

ಜಮೀನುಗಳಿಗೆ ನೀರು ಬಳಕೆ: ಪಾಂಡವ ತೀರ್ಥ ಬಾವಿಯಿಂದ ಗ್ರಾಮದ ಜಮೀನುಗಳಿಗೆ ನೀರುಣಿಸಲಾಗುತ್ತದೆ. ಈ ಬಾವಿಯಲ್ಲಿ ಎಲ್ಲ ಕಾಲದಲ್ಲಿಯೂ ನೀರು ತುಂಬಿರುತ್ತದೆ. ಲಕ್ಷ್ಮಣ ತೀರ್ಥ ಬಾವಿಗೆ ಪ್ರತ್ಯೇಕ ನೀರಿನ ಸೆಲೆ ಇಲ್ಲ. ಪಾಂಡವ ತೀರ್ಥ ಬಾವಿಯಿಂದ ಸೆಲೆ ನೀರು ಹೋಗುತ್ತದೆ. ಒಂದೊಂದು ತೀರ್ಥದಲ್ಲಿ ಒಂದೊಂದು ವಿಶೇಷವಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.