ಶಹಾಪುರ: ಯುಗಾದಿ ಹೊಸ ವರ್ಷದ ನಂತರ ಮೊದಲ ಜಾತ್ರೆ ಚರಬಸವೇಶ್ವರ ಗದ್ದುಗೆ ಆಗಿದೆ. ರೈತರು ಜಾನುವಾರುಗಳನ್ನು ಖರೀದಿಸಲು ಬರುತ್ತಾರೆ. ಪ್ರಸಕ್ತ ಬಾರಿ ಬರದ ಬವಣೆಯಿಂದ ನಲುಗಿರುವ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅದರಂತೆ ಜಾನುವಾರುಗಳಿಗೂ ಸಹ ಅದರ ಬಿಸಿ ತಟ್ಟಿದೆ. ಕೆರೆ ಅಂಗಳದಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದರಿಂದ ಪರದಾಡುವಂತೆ ಆಗಿದೆ.
ಗುರುವಾರದಿಂದ ನಾಲ್ಕು ದಿನ ನಡೆಯುವ ಜಾತ್ರೆಗೆ ಸಗರನಾಡಿನಿಂದ ವಿವಿಧ ಹಳ್ಳಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹೋರಿ, ಎತ್ತು ಮಾರಾಟಕ್ಕೆ ಹಾಗೂ ಖರೀದಿಸಲು ರೈತರು ಬರುತ್ತಾರೆ. ಆದರೆ ಜಾತ್ರೆಯಲ್ಲಿ ಅಗತ್ಯ ಸೌಲಭ್ಯವಿಲ್ಲದೆ ಪರದಾಡುವಂತೆ ಆಗಿದೆ.
ವಿಶಾಲವಾದ ಕೆರೆಯ ಅಂಗಳವಿದ್ದರು ಸಹ ನೆರಳಿನ ಆಸರೆ ಇಲ್ಲ. ಸಾಕಷ್ಟು ಗಿಡಗಳನ್ನು ನೆಟ್ಟು ಬೆಳೆಸಲು ಅವಕಾಶವಿದ್ದರೂ ಅದರ ನಿಷ್ಕಾಳಜಿ ಫಲವಾಗಿ ಈಗ ಸಂಕಷ್ಟ ಎದುರಿಸುವಂತಾಗಿದೆ. ನಾರಾಯಣಪೂರ ಎಡದಂಡೆ ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸಲು ಅವಕಾಶವಿದ್ದರೂ ಸಹ ಯಾರು ಗಮನ ಹರಿಸಿಲ್ಲ. ಜಾತ್ರೆಗೆ ತಂದಿರುವ ಹೋರಿಗಳಿಗೆ ನೀರು ಕುಡಿಸಲು ಸಮರ್ಪಕ ವ್ಯವಸ್ಥೆ ಇಲ್ಲ ಎಂದು ರೈತ ಮಾನಪ್ಪ ಆರೋಪಿಸುತ್ತಾರೆ.
ನೀರಿನ ಸಮಸ್ಯೆ ನೀಗಿಸುವುದರ ಜೊತೆಗೆ ಸೌಲಭ್ಯ ಒದಗಿಸಲು ಸಹ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ದೂರದೂರದಿಂದ ಬಂದಿರುವ ರೈತರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.
ಜಾನುವಾರುಗಳ ಅನುಕೂಲಕ್ಕಾಗಿ ಕುಡಿಯುವ ನೀರಿನ ತೊಟ್ಟಿ ಬುಧವಾರ ಆರಂಭಿಸಲಾಗಿದೆ. ಒಂದು ವಾರದ ಮುನ್ನವೇ ಇಂತಹ ಕಾರ್ಯ ಕೈಗೆತ್ತಿಕೊಂಡರೆ ಇಂಥ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ತೊಟ್ಟಿಗೆ ನಗರಸಭೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ನಗರಸಭೆ ಅಧಿಕಾರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.