ADVERTISEMENT

ಶಹಾಪುರ: ವೈದ್ಯರ ನಡುವೆ ಶೀತಲ ಸಮರ

ಕೋವಿಡ್ ಸಂಕಷ್ಟದ ಸಮಯದಲ್ಲಿ ಹುದ್ದೆಗಾಗಿ ಕಿತ್ತಾಟ; ಆರೋಪ

​ಪ್ರಜಾವಾಣಿ ವಾರ್ತೆ
Published 26 ಮೇ 2021, 16:37 IST
Last Updated 26 ಮೇ 2021, 16:37 IST
ಶಹಾಪುರ ತಹಶೀಲ ಕಚೇರಿಗೆ ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಆಗಮಿಸಿ ಡಾ.ಮಲ್ಲಪ್ಪ ಕಣಜಿಗಿಕರ್ ಅವರನ್ನು ಆಡಳಿತ ವೈದ್ಯಾಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸಿದ್ದನ್ನು ಖಂಡಿಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು
ಶಹಾಪುರ ತಹಶೀಲ ಕಚೇರಿಗೆ ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಆಗಮಿಸಿ ಡಾ.ಮಲ್ಲಪ್ಪ ಕಣಜಿಗಿಕರ್ ಅವರನ್ನು ಆಡಳಿತ ವೈದ್ಯಾಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸಿದ್ದನ್ನು ಖಂಡಿಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು   

ಶಹಾಪುರ: ನಗರದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಗಿದ್ದ ಡಾ.ಮಲ್ಲಪ್ಪ ಕಣಜಿಕರ್ ಅವರನ್ನು ಎತ್ತಂಗಡಿ ಮಾಡಿ ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಪ್ರಭಾರಿ ಹುದ್ದೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ನೀಡಿರುವುದು ಹಲವು ಗುಮಾನಿಗಳಿಗೆ ಕಾರಣವಾಗಿದೆ. ಕೊರೊನಾ ಹಾವಳಿಯ ನಡುವೆ ವೈದ್ಯರ ಶೀತಲ ಸಮರ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ.

ತಾಲ್ಲೂಕು ವೈದ್ಯಾಧಿಕಾರಿ ಯಾಗಿರುವ ಡಾ.ರಮೇಶ ಗುತ್ತೆದಾರ ಅವರು 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅದರ ಜತೆಯಲ್ಲಿ ಚಾಮನಾಳ ಹಾಗೂ ಹತ್ತಿಗೂಡೂರ ಪ್ರಾಥಮಿಕ ಆರೋಗ್ಯ ಕೇಂದ್ರ, ಶಹಾಪುರ ನಗರ ಆರೋಗ್ಯ ಕೇಂದ್ರ.ಈಗ ನಗರದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಪ್ರಬಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಸಾಕಷ್ಟು ಹಿರಿಯ ವೈದ್ಯರು ಇದ್ದರು ಕೂಡಾ ಹೆಚ್ಚವರಿಯಾಗಿ ಪ್ರಭಾರಿ ಹುದ್ದೆ ನೀಡಿರುವುದರಿಂದ ಕೆಲಸದ ಒತ್ತಡ ಜಾಸ್ತಿಯಾಗಿ ಸರಿಯಾದ ಸೇವೆ ರೋಗಿಗಳಿಗೆ ಸಿಗುವುದಿಲ್ಲ ಎನ್ನುವುದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಅವರ ದೂರು.

ನಗರದ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ಮಲ್ಲಪ್ಪ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಖಾಸಗಿ ಕ್ಲಿನಿಕ್ ನಡೆಸಬೇಡಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದರಿಂದ ಇದು ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ. ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರು ಒತ್ತಡ ಹಾಕಿ ಡಾ.ಮಲ್ಲಪ್ಪ ಅವರನ್ನು ಎತ್ತಂಗಡಿ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ರಾಯಪ್ಪ ಸಾಲಿಮನಿ ಆರೋಪಿಸಿದ್ದಾರೆ.

ADVERTISEMENT

‘ಇಂಥ ಸಂಕಷ್ಟದ ಕಾಲದಲ್ಲಿ ಸುಗಮವಾಗಿ ಆಡಳಿತ ನಡೆಸುವ ಉದ್ದೇಶದಿಂದ ಡಾ.ಮಲ್ಲಪ್ಪ ಕಣಜಿಗಿಕರ್ ಅವರನ್ನು ಬಿಡುಗಡೆಗೊಳಿಸಿ, ಹಿರಿಯ ವೈದ್ಯರು ಇದ್ದರೂ ಹುದ್ದೆ ನಿರ್ವಹಿಸಲು ಯಾರು ಮುಂದೆ ಬರದ ಕಾರಣ ನನಗೆ ವಹಿಸಿದ್ದಾರೆ. ಎಲ್ಲರೂ ಮೇಲಧಿಕಾರಿಗಳ ಆಜ್ಞೆ ಪಾಲನೆ ಮಾಡಬೇಕು. ಎಲ್ಲರೂ ಸಮನ್ವಯದಿಂದ ಕೆಲಸ ನಿರ್ವಹಸ ಬೇಕಾಗಿದೆ’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.