
ಶಹಾಪುರ: ತಾಲ್ಲೂಕಿನ ದರಿಯಾಪುರ ಗ್ರಾಮದ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸಜ್ಜೆ ಬೆಳೆಯು ಕಾಳು ಕಟ್ಟುವ ಹಂತದಲ್ಲಿ ಜೊಳ್ಳು ಆಗಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಕಂಪನಿಯು ಕಳಪೆ ಇಲ್ಲವೆ ನಕಲಿ ಬೀಜ ವಿತರಿಸಿದೆ’ ಎಂದು ಸಜ್ಜೆ ಬೆಳೆದ ರೈತರು ಆರೋಪಿಸಿದ್ದಾರೆ.
‘ನಾವು ಖಾಸಗಿ ಕಂಪನಿ ಒಂದರಿಂದ ಪ್ರತಿ ಪಾಕೇಟ್ ಗೆ ₹ 800 ರಂತೆ ಖರೀದಿಸಿ ಬಿತ್ತನೆ ಮಾಡಿದ್ದೇವೆ. ರಸಗೊಬ್ಬರ ಹಾಗೂ ಇನ್ನಿತರ ವೆಚ್ಚ ಸೇರಿ ಪ್ರತಿ ಎಕರೆಗೆ₹ 6ರಿಂದ 8 ಸಾವಿರ ಖರ್ಚು ಮಾಡಿದ್ದೇವೆ. ಬೆಳೆಯು ಅತ್ಯಂತ ಮುಖ್ಯ ಘಟ್ಟವಾಗಿರುವ ಸಂದರ್ಭದಲ್ಲಿ ಕಾಳು ಕಟ್ಟದೆ ಸುಂಕ ಕಟ್ಟಿ ಜೊಳ್ಳು ಕಾಣಿಸಿಕೊಂಡಿದೆ. ನಮ್ಮ ಗ್ರಾಮದ ಸುತ್ತಮುತ್ತಲು ಸುಮಾರು 60 ಎಕರೆ ಜಮೀನಿನಲ್ಲಿ 25ಕ್ಕೂ ಹೆಚ್ಚು ರೈತರು ಬಿತ್ತನೆ ಮಾಡಿದ್ದೇವೆ’ ಎನ್ನುತ್ತಾರೆ ನಷ್ಟ ಅನುಭವಿಸಿದ ರೈತ ಯಂಕಣ್ಣ ಇನಾಂದಾರ.
ಬಿತ್ತನೆ ಮಾಡಿದ ಸ್ಥಳಕ್ಕೆ ಮಂಗಳವಾರ ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಜ್ಜೆ ಕಾಳು ಹಾಗೂ ಸದ್ಯ ಬೆಳೆದು ನಿಂತ ಬೆಳೆಯ ಬಗ್ಗೆ ವಿವರವಾಗಿ ತಪಾಸಣೆ ಮಾಡಿ ವರದಿ ನೀಡುವಂತೆ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಲಾಗುವುದು. ರೈತರು ತಾವು ಖರೀದಿಸಿದ ಬೀಜದ ರಸೀದಿ ಹಾಗೂ ಒಂದಿಷ್ಟು ಬೀಜವನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.
ರೈತ ಮುಖಂಡರಾದ ಭೀಮಣ್ಣಗೌಡ ಪಾಟೀಲ, ಬಸವರಾಜ, ಶಿವಪ್ಪ ಇನಾಂಪದಾರ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.