ಪೊಲೀಸ್
(ಸಾಂದರ್ಭಿಕ ಚಿತ್ರ)
ಶಹಾಪುರ (ಯಾದಗಿರಿ ಜಿಲ್ಲೆ): ವಡಗೇರಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ಕಾನ್ಸ್ಟೆಬಲ್ ಅವರ ಸಮವಸ್ತ್ರ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ ಇಬ್ಬರು ವ್ಯಕ್ತಿಗಳಿಗೆ ಶುಕ್ರವಾರ ಶಹಾಪುರ ಜೆಎಂಎಫ್ಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರು ತಲಾ ₹12 ಸಾವಿರ ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲರಾದರೆ ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂಬ ಆದೇಶ ನೀಡಿದ್ದಾರೆ.
ವಡಗೇರಾ ಗ್ರಾಮದ ಮಲ್ಲಪ್ಪ ಮರೆಪ್ಪ ಇಟಗಿ (ಲಪಾಟಿ) ಹಾಗೂ ಮುದಕಪ್ಪ ತಿಮ್ಮಯ್ಯ ಪಿಡ್ಡಿಗೌಡ (ಶಾಸ್ತ್ರಿ) ಶಿಕ್ಷೆಗೆ ಒಳಗಾದ ವ್ಯಕ್ತಿಗಳು.
ವಡಗೇರಾ ಠಾಣೆಯಲ್ಲಿ ಅಂದು ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ಕಾನ್ಸ್ಟೆಬಲ್ ರಾಜಕುಮಾರ ಆಗಿದ್ದಾರೆ.
ಏನಿದು ಪ್ರಕರಣ?:
ವಡಗೇರಾ ಠಾಣೆಯಲ್ಲಿ 2019 ಮಾರ್ಚ್ 14ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ಕಾನ್ಸ್ಟೆಬಲ್ ರಾಜಕುಮಾರ ಅವರ ಬಳಿ ನಮ್ಮ ಟ್ರ್ಯಾಕ್ಟರ್ ಚಾಲಕನ್ನು ಯಾಕೆ ಹಿಡಿದುಕೊಂಡು ಬಂದಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಸಮವಸ್ತ್ರ ಹಿಡಿದು ಜಗ್ಗಾಡಿದ್ದಾರೆ ಎಂದು ಮಲ್ಲಪ್ಪ ಹಾಗೂ ಮುದಕಪ್ಪ ವಿರುದ್ಧ ರಾಜಕುಮಾರ ದೂರು ದಾಖಲಿಸಿದ್ದರು.
ಅಂದಿನ ಸಿಪಿಐ ಶಂಕರಗೌಡ ನ್ಯಾಮಣ್ಣನವರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ದೂರುದಾರರ ಪರವಾಗಿ ಎಪಿಪಿ ಮರೆಪ್ಪ ಹಾದಿಮನಿ ಹಳಿಸಗರ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.