ಕಕ್ಕೇರಾ: ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಆರಾಧ್ಯದೈವ ಸೋಮನಾಥ ದೇವರಿಗೆ 32 ವರ್ಷಗಳ ಬಳಿಕ ಭಾನುವಾರ ಪಟ್ಟಣದಲ್ಲಿ ಭಕ್ತರು ನೀಡಿದ ಹಾಲಿನ ಅಭಿಷೇಕ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ನಂದಣ್ಣಪ್ಪ ಪೂಜಾರಿ ಸಾನ್ನಿಧ್ಯದಲ್ಲಿ ಹಾಲಿನ ಅಭಿಷೇಕ ಜರುಗಿತು. ಪಟ್ಟಣದ ಸದರಗಟ್ಟಿಯಲ್ಲಿ 21 ತಾಮ್ರದ ಕೊಡಗಳಲ್ಲಿ ಸಂಗ್ರಹಿಸಲಾಗಿದ್ದ ಹಾಲಿನ ಕೊಡಗಳನ್ನು ಪಟ್ಟಣದ ಪ್ರಮುಖರ ಸಮ್ಮುಖದಲ್ಲಿ ಡೊಳ್ಳು ಸೇರಿ ವಾದ್ಯಮೇಳ ಹಾಗೂ ಭಾಜಾಭಜಂತ್ರಿಗಳೊಂದಿಗೆ ಶ್ರದ್ಧಾ, ಭಕ್ತಿಯಿಂದ ದೇವಾಲಯಕ್ಕೆ ಕೊಂಡೊಯಲಾಯಿತು. ದೇವರ ಬಾವಿಯಿಂದ 108 ನೀರಿನ ಕೊಡಗಳು ಹಾಗೂ 21 ಹಾಲಿನ ಕೊಡಗಳಿಂದ ಮತ್ತು ಬಾಳೆಹಣ್ಣು, ತುಪ್ಪದಿಂದ ಸೌರಾಷ್ಟ್ರದ ಸೋಮೇಶ್ವರ ದೇವರಿಗೆ ಅಭಿಷೇಕ ಮಾಡಲಾಯಿತು.
ಅನಂತಾಚಾರ್ಯ ಜೋಶಿ ಮಂತ್ರಘೋಷ ಪಠಿಸಿದರು. ಪರಮಣ್ಣ ಪೂಜಾರಿ ಹಾಲಿನ ಅಭಿಷೇಕ ಕಾರ್ಯಕ್ರಮ ನಡೆಸಿದರು.
ನಂದಣ್ಣಪ್ಪ ಪೂಜಾರಿ ಮಾತನಾಡಿ,‘32 ವರ್ಷಗಳಿಂದ ತಟಸ್ಥವಾಗಿದ್ದ ಸೋಮನಾಥ ದೇವರಿಗೆ ಹಾಲಿನ ಅಭಿಷೇಕ ಶ್ರಾವಣ ಮಾಸದಲ್ಲಿ ಮಾಡಬೇಕು ಎಂಬುದು ಭಕ್ತರ ಮಹಾಶಯವಾಗಿತ್ತು. ಅವರ ಆಶಯದಂತೆ ಇಂದು ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಹಾಲಿನ ಅಭಿಷೇಕ ಮಾಡಲಾಗಿದೆ ಎಂದರು.
ಪ್ರಮುಖರಾದ ಹನುಮಂತರಾಯ ಜಹಾಗೀರದಾರ, ಚಕ್ರಪ್ಪ ಪೂಜಾರಿ, ಅಯ್ಯಣ್ಣ ಪೂಜಾರಿ, ಭದ್ರಯ್ಯಸ್ವಾಮಿ, ದೇವಪ್ಪ ಜಂಪಾ, ಗುಂಡಪ್ಪ ಸೊಲಾಪೂರ, ಬಸವರಾಜ ಆರ್ಯಶಂಕರ, ರಾಜು ನಿಂಗಯ್ಯ ಬೂದಗುಂಪಿ, ಸೋಮಣ್ಣ ಡೊಳ್ಳಿನ, ನಂದಣ್ಣ ವಾರಿ, ರಮೇಶ ಶೆಟ್ಟಿ, ಹವಾಲ್ದಾರ್, ಪರಮಣ್ಣ ಕಮತಗಿ, ಬಸಯ್ಯಸ್ವಾಮಿ, ಪರಮಣ್ಣ ಜಂಪಾ, ಲಕ್ಷ್ಮಣ ಲಿಂಗದಳ್ಳಿ, ಪರಮಣ್ಣ ತೇರಿನ್, ಸಿದ್ದಣ್ಣ ದೇಸಾಯಿ, ಚಂದ್ರು ವಜ್ಜಲ್, ಷಣ್ಮುಖಪ್ಪ ದೊರೆ, ಹಣಮಂತ್ರಾಯ ದೊರೆ ಸೇರಿದಂತೆ ಅಪಾರ ಭಕ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.