ಗುರುಮಠಕಲ್: ಪಟ್ಟಣದ ಹೊರವಲಯದಲ್ಲಿ ಕ್ರೀಡಾ ಇಲಾಖೆ ಜಮೀನು ಹುಡುಕುಕೊಟ್ಟರೆ ಸರ್ಕಾರದ ಹಂತದಲ್ಲಿ ಅನುದಾನವನ್ನು ತರುವ ಮೂಲಕ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಸಿದ್ಧ’ ಎಂದು ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದರು.
ಪಟ್ಟಣದ ಜವಹಾರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ಪುರಸಭೆ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಐದು ಎಕರೆ ಜಮೀನು ಸಿಕ್ಕರೆ ಹೈಟೆಕ್ ಕ್ರೀಡಾಂಗಣ ನಿರ್ಮಿಸುವ ಕನಸಿದೆ. ನಮ್ಮ ಭಾಗದಲ್ಲಿ ಕ್ರೀಡಾ ಪ್ರತಿಭೆಗಳಿದ್ದಾರೆ. ಅಂತಹ ಆಸಕ್ತರಿಗೆ ಅವಶ್ಯಕ ಸೌವಲತ್ತುಗಳು ಸಿಗುವಂತಾಗಬೇಕು. ಕ್ರೀಡಾ ಇಲಾಖೆಯಲ್ಲಿ ಬರುವ ಯಾವ ಸೌಲಭ್ಯವನ್ನೂ ನಮ್ಮ ಕ್ಷೇತ್ರಕ್ಕೆ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಭಾಗದ ಕ್ರೀಡಾಪಟುಗಳಿಗೆ ಸೌಲಭ್ಯ ಕೊಡುವ ನಿಟ್ಟಿನಲ್ಲಿ ಕೆಲಸವಾಗಬೇಕು’ ಎಂದು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಲು-ಗೆಲುವು ಸಾಮಾನ್ಯ. ಗೆಲ್ಲುವ ಛಲವಿರಬೇಕು, ಸೋಲನ್ನೂ ಸಮಾನಾಗಿ ಸ್ವೀಕರಿಸುವಂತಿರಬೇಕು. ಕ್ರೀಡೆಗಳಲ್ಲಿಯೂ ನಮ್ಮ ಭಾಗದ ಪ್ರತಿಭೆಗಳು ಉನ್ನತಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ, ಜಿಲ್ಲಾ ಕ್ರೀಡಾ ಅಧಿಕಾರಿ ರಾಜು ಬಾವಿಕಟ್ಟಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ, ಇಸಿಒ ರವೀಂದ್ರ ಚವಾಣ, ಶಿವರೆಡ್ಡಿ, ಪ್ರಕಾಶ ನಿರೇಟಿ, ಶರಣು ಆವಂಟಿ, ಪುರಸಭೆ ಸದಸ್ಯರಾದ ಸಿರಾಜ ಚಿಂತಕುಂಟಿ, ನವಾಜರೆಡ್ಡಿ, ಬಾಲು ದಾಸರಿ, ನರ್ಮದಾ, ಬಸಣ್ಣ ದೇವರಳ್ಳಿ, ಪಿಎಸ್ಐ ದಿನೇಶ ಎಂ.ಟಿ., ದೈಹಿಕ ಶಿಕ್ಷಕರಾದ ಸುನೀಲ ಶುಕ್ಲಾ, ಸುಧಾಕರ ಜನಜ, ಆಂಜನೇಯ, ಮಹೇಶ ಎಸ್.ಪಿ., ಮಲ್ಲೇಶಪ್ಪ, ಮಾಳಮ್ಮ ಚಿನ್ನಾಕಾರ, ವೆಂಕಟರಾಮುಲು, ಸಂಜೀವಕುಮಾರ, ರವಿ ಗವಿನೋಳ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.