ADVERTISEMENT

ಒಬ್ಬ ಬಾಲಕಿಯೂ ಅನುತ್ತೀರ್ಣ ಆಗಬಾರದು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪರಿಶೀಲನಾ‌‌ ಸಭೆ; ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:30 IST
Last Updated 18 ಜನವರಿ 2026, 5:30 IST
ಯಾದಗಿರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಮಾತನಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು 
ಯಾದಗಿರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಮಾತನಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು     

ಯಾದಗಿರಿ: ‘ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆ ಕಾಣಲು ಪೂರ್ವಭಾವಿ ಪರೀಕ್ಷೆಗಳತ್ತ ಹೆಚ್ಚು ಕಾಳಜಿ ವಹಿಸಬೇಕು. ಯಾವುದೇ ಒಬ್ಬ ಬಾಲಕಿಯು ಅನುತ್ತೀರ್ಣ ಆಗದಂತೆ ನೋಡಿಕೊಳ್ಳಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆ -1ರ‌ ಫಲಿತಾಂಶ ಪರಿಶೀಲನಾ‌‌ ಸಭೆ ನಡೆಸಿ ಅವರು ಮಾತನಾಡಿದರು.

‘ಬಾಲಕಿಯೊಬ್ಬಳು ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗದೆ ಇದ್ದರೆ, ಶಾಲೆಯಿಂದ ಹೊರಗೆ ಉಳಿದರೆ ಬಾಲ್ಯ ವಿವಾಹಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದರು ಅಂತಹುದ್ದು ತಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ, ಬಾಲಕಿಯರ ಫಲಿತಾಂಶವು 100 ಪರ್ಸೆಂಟ್ ಬರುವಂತೆ ಮಾಡಿ’ ಎಂದರು.

ADVERTISEMENT

‘ಅನುದಾನ ರಹಿತ ಶಾಲೆಗಳು ಫಲಿತಾಂಶವು ಉತ್ತಮವಾಗಿಯೇ ಇರುತ್ತದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳತ್ತ ಹೆಚ್ಚಿನ ಗಮನ ಹರಿಸಬೇಕು. ಕಚೇರಿಯಿಂದ ನೀಡಲಾದ ಕಲಿಕೆ ಸುಧಾರಣೆಯ ಟ್ರ್ಯಾಕಿಂಗ್ ಶೀಟ್‌ನಲ್ಲಿನ ಅಂಶಗಳ ಪಾಲನೆ ಮಾಡಬೇಕು. ಪ್ರತಿ ವಾರದಂತೆ ಅದರಲ್ಲಿ ಸೂಚಿಸಲಾದ ಮಾದರಿಯನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಸೂಚಿಸಿದರು.

‘2ನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಶೇ 90ಕ್ಕೂ ಹೆಚ್ಚು ಫಲಿತಾಂಶ ಬರುವಂತೆ ಕ್ರಮವಹಿಸಬೇಕು. ಆಯಕ್ತರ ಕಚೇರಿಯಿಂದ ನೀಡಿದ ಮಿಷನ್ 40+ ಬಳಸಿಕೊಂಡು, ಚಿಕಿತ್ಸಕಾ ವಿಧಾನದಲ್ಲಿ ಪರಿಹಾರ ಬೋಧನೆ ಮಾಡಿ ಫಲಿತಾಂಶ ವೃದ್ಧಿಸಲು ಮುಂದಾಗಬೇಕು’ ಎಂದರು.

‘ಪರೀಕ್ಷೆಗೆ 60 ದಿನಗಳಿದ್ದು, ಯುದ್ಧೋಪಾದಿಯಲ್ಲಿ ವಿದ್ಯಾರ್ಥಿಗಳನ್ನು ಸಕಾರಾತ್ಮಕವಾಗಿ ಪ್ರೋತ್ಸಾಹಿಸಿ ತಯಾರಿ ಮಾಡಬೇಕು. ಪೂರ್ವ ಸಿದ್ಧತಾ ಪರೀಕ್ಷೆ -1 ರಲ್ಲಿ 16ರಿಂದ 20 ಅಂಕ ಪಡೆದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ‌ ನಿಗಾವಹಿಸಬೇಕು. ಮುಂದಿನ ಪರೀಕ್ಷೆಗಳಲ್ಲಿ ಇನ್ನೂ ಹೆಚ್ವಿನ ಅಂಕ ಪಡೆಯುಂತೆ ಪ್ರೋತ್ಸಾಹಿಸಬೇಕು’ ಎಂದು ತಾಕೀತು ಮಾಡಿದರು.

‘ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳತ್ತ ಗಮನ ನೀಡಿ. ಸಮೀಪದ ಪ್ರೌಢ ಅಥವಾ ಪ್ರಾಥಮಿಕ ಶಾಲೆಗಳಲ್ಲಿ ಸಂಪನ್ಮೂಲ ಶಿಕ್ಷಕರಿದ್ದರೆ ಮೂಲ ಶಾಲೆಯ ಪ್ರಕ್ರಿಯೆಗೆ ಧಕ್ಕೆಯಾಗದಂತೆ ಆಹ್ವಾನಿಸಿ ಪುನಶ್ಚೇತನ ತರಗತಿ ನಡೆಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ಕೆಲವೊಂದು ಶಾಲೆಗಳಲ್ಲಿ ಫಲಿತಾಂಶ ಹೆಚ್ಚಳವಾಗುತ್ತಿದೆ. ಅದರ ಹಿಂದೆ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಶ್ರಮವಿದೆ. ಆ ನಿಟ್ಟಿನಲ್ಲಿ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಶಿಕ್ಷಕರು ವಿಶೇಷ ಪ್ರಯತ್ನ ಮಾಡಿ, ಫಲಿತಾಂಶ ಏರಿಕೆಗೆ ಮುಂದಾಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಮಾತನಾಡಿ, ‘ಜಿಲ್ಲೆಯು ಆರಂಭದಿಂದಲೂ ವಾರ್ಷಿಕ ಫಲಿತಾಂಶದಲ್ಲಿ ಕೆಳಗಿನ ಸ್ಥಾನಗಳ ಜಿಲ್ಲೆಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿದೆ. ಮುಂದಿನ ವರ್ಷಗಳಲ್ಲಿ ಸುಧಾರಣೆ ಕಾಣುವತ್ತು ಎಲ್ಲರೂ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.

ಸಭೆಯಲ್ಲಿ ಡಯಟ್ ಪ್ರಾಂಶುಪಾಲ ಡಯಟ್ ಪ್ರಾಂಶುಪಾಲ ವೃಷಬೇಂದ್ರ ಸೇರಿದಂತೆ ಬಿಇಒ ಹಲವರು ಉ‍ಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.