ಸುರಪುರದ ರಮಣಪ್ಪನಾಯಕನ ಕಟ್ಟೆ ಹತ್ತಿರ ಮಂಗಳವಾರ ರಣ ಗಂಭಾರೋಹಣ ಅದ್ಧೂರಿಯಾಗಿ ಜರುಗಿತು
ಸುರಪುರ: ಸಗರನಾಡಿನ ಆರಾಧ್ಯ ದೈವ ವೇಣುಗೋಪಾಲಸ್ವಾಮಿ ಹಾಲೋಕುಳಿ ಜಾತ್ರೆಯ ಎರಡನೇ ದಿನದ ರಣಗಂಭಾರೋಹಣ ರಮಣಪ್ಪನಾಯಕನ ಕಟ್ಟೆಯ ಮುಂಭಾಗದಲ್ಲಿ ಮಂಗಳವಾರ ಅದ್ಧೂರಿಯಾಗಿ ಜರುಗಿತು.
ಅರಮನೆಯಲ್ಲಿ ರಾಜಾ ಕೃಷ್ಣಪ್ಪನಾಯಕ ಸಂಪ್ರದಾಯದಂತೆ ಸಭೆ ನಡೆಸಿ ಸ್ತಂಭಾರೋಹಣಕ್ಕೆ ಒಪ್ಪಿಗೆ ಸೂಚಿಸಿದರು. ನಂತರ ರಾಜಗುರು ವಿಜಯರಾಘವನ ಬುಕ್ಕಪಟ್ಟಣಂ ಅವರು ಮೇನೆಯಲ್ಲಿ ಆಗಮಿಸಿ ಎರಡು ಸ್ತಂಭಗಳಿಗೆ ಪೂಜೆ ಸಲ್ಲಿಸಿ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.
ಹಿನ್ನೆಲೆ: ಸುರಪುರ ಸಂಸ್ಥಾನದ ಅಭಿವೃದ್ಧಿ, ಸಾಮ್ರಾಜ್ಯ ವಿಸ್ತರಣೆ ಮತ್ತು ಶತ್ರುಗಳೊಂದಿಗೆ ಹೋರಾಟದಲ್ಲಿ ಭಾಗವಹಿಸಿ ವೀರಮರಣ ಅಪ್ಪಿದ ಸೈನಿಕರ ಸ್ಮರಣೆಗಾಗಿ ಈಗ ಇರುವ ಸರ್ದಾರ್ ವಲ್ಲಭಭಾಯಿ ವೃತ್ತದಲ್ಲಿ ವಿಜಯದ ಕಟ್ಟೆ ಸ್ಥಾಪಿಸಲಾಗಿತ್ತು.
ಅನೇಕ ಯುದ್ಧಗಳಲ್ಲಿ ಭಾಗವಹಿಸಿ ಅನನ್ಯ ಯುದ್ಧಕೌಶಲ ಪ್ರದರ್ಶಿಸಿ ಅನೇಕ ಹಲವು ಸಲ ಜಯತಂದುಕೊಟ್ಟ ರಮಣಪ್ಪನಾಯಕನ ಹೆಸರಲ್ಲಿ ಆ ಕಟ್ಟೆ ಕರೆಯಲಾಯಿತು.
ಹಾಲೋಕುಳಿ ಜಾತ್ರೆಯ ಸಂದರ್ಭದಲ್ಲಿ ಮೊದಲು ದೇವಸ್ಥಾನದಲ್ಲಿ ಆವರಣದಲ್ಲಿ ಮಾತ್ರ ಸ್ತಂಭಾರೋಹಣ ನಡೆಯುತ್ತಿತ್ತು. ಹುತಾತ್ಮರ ಸವಿನೆನಪಿನಲ್ಲಿ ರಮಣಪ್ಪನಾಯಕನ ಕಟ್ಟೆಯ ಹತ್ತಿರ ಎರಡು ಕಂಬಗಳ ಆರೋಹಣ ನಡೆಯತೊಡಗಿತು. ಇದಕ್ಕೆ ‘ರಣ ಗಂಭಾರೋಹಣ’ ಎಂಬ ಹೆಸರು ಇಡಲಾಯಿತು.
ಮಂಗಳವಾರ ನಿಗದಿತ ಗ್ರಾಮಗಳ ಕಂಬಗಳನ್ನು ಏರಿ ಕಂಬದ ತುದಿಗೆ ಕಟ್ಟಿದ ಬಾಳೆಹಣ್ಣು, ಕೊಬ್ಬರಿ ಹರಿದರು. ನೆರದಿದ್ದ ಸಹಸ್ರಾರು ಭಕ್ತರು ಚಪ್ಪಾಳೆ, ಹರ್ಷೋದ್ಘಾರ ಮಾಡಿದರು. ಸಂಸ್ಥಾನದ ವತನದಾರರು, ಚಾಜದವರು ಇದ್ದರು. ರಣಸ್ತಂಭಾರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.