ADVERTISEMENT

ಆರೋಗ್ಯಕರ ಸಮಾಜ ಸೃಷ್ಟಿಸುವ ಶಕ್ತಿ ಪತ್ರಿಕೆಗೆ ಇದೆ: ಶಾಸಕ ರಾಜೂಗೌಡ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 3:04 IST
Last Updated 15 ಜೂನ್ 2021, 3:04 IST
ಸುರಪುರದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನವನ್ನು ಶಾಸಕ ರಾಜೂಗೌಡ ಉದ್ಘಾಟಿಸಿ ಮಾತನಾಡಿದರು
ಸುರಪುರದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನವನ್ನು ಶಾಸಕ ರಾಜೂಗೌಡ ಉದ್ಘಾಟಿಸಿ ಮಾತನಾಡಿದರು   

ಸುರಪುರ: ‘ಪತ್ರಿಕೆಗಳು ಸಮಾಜದ ಕಣ್ಣು. ಆರೋಗ್ಯಕರವಾದ ಸಮಾಜವನ್ನು ಸೃಷ್ಟಿಸುವ ಶಕ್ತಿ ಪತ್ರಿಕೆಗಳಿಗಿದೆ. ನಮ್ಮ ಬದುಕಿನಲ್ಲಿ ಪತ್ರಿಕೆಗಳಿಗಿರುವ ಹಿರಿಮೆಗೆ ಬೇರೆ ವ್ಯಾಖ್ಯಾನ ಬೇಕಿಲ್ಲ. ಆದುದರಿಂದಲೇ ಲೇಖನಿ ಖಡ್ಗಕ್ಕಿಂತ ಹರಿತ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ’ ಶಾಸಕ ರಾಜೂಗೌಡ ಹೇಳಿದರು.

ಇಲ್ಲಿಯ ಹಳೆ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಧ್ಯಮ ಕ್ಷೇತ್ರ ಸತ್ಯದ ಕನ್ನಡಿ ಇದ್ದ ಹಾಗೆ. ಸಮಾಜವನ್ನು ತಿದ್ದುವ ಶಕ್ತಿ ಲೇಖನಿಯಲ್ಲಿದೆ. ಸಮಾಜದ ಸ್ವಾಸ್ಥ್ಯತೆ ಕಾಪಾಡಲು, ಸಮಾಜದ ಶುದ್ಧೀಕರಣಕ್ಕೆ ಪತ್ರಿಕಾ ಕ್ಷೇತ್ರದ ಸೇವೆ ಶ್ಲಾಘನೀಯ’ ಎಂದರು.

ADVERTISEMENT

ಪತ್ರಕರ್ತರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಂಜೀವರಾವ್ ಕುಲಕರ್ಣಿ ಮಾತನಾಡಿದರು. ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಂದೂಧರ ಸಿನ್ನೂರ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲನಾಯಕ ಜೇವರ್ಗಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾ.ಪಂ. ಇಒ ಅಮರೇಶ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ, ಸಿಪಿಐ ಸಾಹೇಬಗೌಡ ಪಾಟೀಲ್, ನಗರಸಭೆ ಪೌರಾಯುಕ್ತ ಜೀವನಕುಮಾರ, ಸಿಡಿಪಿಒ ಲಾಲಸಾಬ್ ಪೀರಾಪುರ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಗುಂಡಾಭಟ್ ಜೋಶಿ, ಕಾರ್ಯದರ್ಶಿ ರವೀಂದ್ರ ಕುಲಕರ್ಣಿ, ಕೆಂಭಾವಿ, ಕಕ್ಕೇರಾ, ಸುರಪುರದ ಪತ್ರಕರ್ತರು ಇದ್ದರು.

ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಯ್ಯ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷ ಗಿರೀಶ್ ಶಾಬಾದಿ ಸ್ವಾಗತಿಸಿದರು. ಕ್ಷೀರಲಿಂಗಯ್ಯ ಹಿರೇಮಠ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.