ಯಾದಗಿರಿ: ಕಳವು ಪ್ರಕರಣದಲ್ಲಿ ಅಪರಾಧ ಸಾಬೀತು ಆಗಿದ್ದರಿಂದ ರವಿ ಅಲಿಯಾಸ್ ಗಡ್ಯಾ ಭೀಮಣ್ಣ ಪವಾರ್ಗೆ 15 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹50 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಚಿದಾನಂದ ಬಡಿಗೇರ ಅವರು ಡಿ.15ರಂದು ಆದೇಶ ಹೊರಡಿಸಿದ್ದಾರೆ.
ಘಟನೆ ವಿವರ: 2015ರ ಜನವರಿ 12ರಂದು ₹1.39 ಲಕ್ಷ ಹಣ, ಬಂಗಾರ, ಬೆಳ್ಳಿ ಸಾಮಾನು ಕಳವು, ಮಾರ್ಚ್ 12ರಂದು ₹1.20 ಲಕ್ಷ ಹಣ, ಬಂಗಾರ ಕಳವು, ಏಪ್ರಿಲ್ 12ರಂದು ₹58 ಸಾವಿರ ಬೆಲೆ ಬಾಳುವ ಸ್ವತ್ತು ದೋಚಿಕೊಂಡ ಹೋದ ಬಗ್ಗೆ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಗಮ್ಮ ಬೋಸ್ಲೆ, ಹಂಗೂರಬಾಯಿ ಪವಾರ್, ದೇವಕ್ಕಿ ಬೋಸ್ಲೆ, ಸುಚಿತಾ ಚಿಗರಿಕಾರ, ರಾಧಿಕಾ ಪವಾರ್, ರಡ್ಡಿ ಅಲಿಯಾಸ್ ರಾಜಾ, ಅಶೋಕ, ರವಿ ಅಲಿಯಾಸ್ ಗಡ್ಯಾ ಭೀಮಣ್ಣ ಪವಾರ್, ಟೋಪ್ಯಾ ಅಲಿಯಾಸ್ ಟೋಪಲೆ ಬೋಸ್ಲೆ, ಮಹಾಂತೇಶ ಬೋಸ್ಲೆಆರೋಪಿಗಳು. ಎಲ್ಲರೂ ಸುರಪುರ ತಾಲ್ಲೂಕಿನ ಮಾಲಗತ್ತಿಯವರು. ಇದರಲ್ಲಿರವಿ ಅಲಿಯಾಸ್ ಗಡ್ಯಾ ಭೀಮಣ್ಣ ಪವಾರ್ ಅಪರಾಧ ಸಾಬೀತು ಆಗಿದೆ.
ಮೂರು ಪ್ರಕರಣಗಳ ಬಗ್ಗೆ ಸುರಪುರ ಪಿಐ ಗಂಗಾಧರ ಬಿ.ಎಂ, ಪಿಎಸ್ಐ ಎಚ್.ಎಸ್.ಪಟ್ಟೇದ್, ಎಎಸ್ಐ ಗೋಪಾಲ, ಪಿಸಿ ನಾಗರಾಜ ತನಿಖೆ ಮಾಡಿ ಸುರಪುರ ಜೆಎಂಎಫ್ ನ್ಯಾಯಾಲಯದಲ್ಲಿ ದೋಷರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ಅಪರಾಧ ಸಾಬೀತು ಆಗಿದ್ದರಿಂದ ರವಿಗೆ ಎರಡು ಪ್ರಕರಣಗಳಲ್ಲಿ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ ₹20 ಸಾವಿರ ದಂಡ, ಒಂದು ಪ್ರಕರಣದಲ್ಲಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹10 ಸಾವಿರ ದಂಡ ಒಟ್ಟು ಮೂರು ಪ್ರಕರಣಗಳಲ್ಲಿ 15 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹50 ಸಾವಿರ ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಸುರಪುರದ ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ ಜಾಗೀರದಾರ ಅವರು ವಾದ ಮಂಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.