ADVERTISEMENT

ಚಂಡರಕಿಯಲ್ಲಿ ಆಸ್ಪತ್ರೆಯೇ ಇಲ್ಲ!

ಜೂನ್‌ 21 ರಂದು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ

ಬಿ.ಜಿ.ಪ್ರವೀಣಕುಮಾರ
Published 15 ಜೂನ್ 2019, 19:45 IST
Last Updated 15 ಜೂನ್ 2019, 19:45 IST
ಚಂಡರಕಿ ಗ್ರಾಮದಲ್ಲಿ ಸಮರ್ಪಕ ರಸ್ತೆ ಇಲ್ಲ
ಚಂಡರಕಿ ಗ್ರಾಮದಲ್ಲಿ ಸಮರ್ಪಕ ರಸ್ತೆ ಇಲ್ಲ   

ಯಾದಗಿರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೂನ್ 21ರಂದು ವಾಸ್ತವ್ಯ ಮಾಡಲಿರುವ ಚಂಡರಕಿ ಗ್ರಾಮದಲ್ಲಿ ರೈತರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ಬ್ಯಾಂಕ್, ಆಸ್ಪತ್ರೆ ಇಲ್ಲ!

ಈ ಗ್ರಾಮದಲ್ಲಿ 910 ಸಣ್ಣ ರೈತರು, 219 ಅತಿ ಸಣ್ಣ ರೈತರು, 120 ದೊಡ್ಡ ರೈತರು, ಸುಮಾರು 4089 ಮತದಾರರು ಇದ್ದಾರೆ. 5604 ಎಕರೆ ಕಂದಾಯ ಭೂಮಿ, 4088 ಎಕರೆ ಸಾಗುವಳಿ ಭೂಮಿ ಇದೆ.

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬಂದರೆ ಗುರುಮಠಕಲ್ ಪಟ್ಟಣಕ್ಕೆ ಓಡಬೇಕು. ಹೆರಿಗೆ ಮತ್ತಿತರ ಗಂಭೀರ ಸಮಸ್ಯೆಗಳಿಗೆ ವೈದ್ಯರು ಶಿಫಾರಸು ಮಾಡುವುದೇ ರಾಯಚೂರಿಗೆ. ಆಸ್ಪತ್ರೆ ಇಲ್ಲದಿದ್ದರಿಂದ ವೈದ್ಯರು ಸೂಚಿಸಿದ ಕಡೆ ತೆರಳುವ ಸ್ಥಿತಿ ಗ್ರಾಮಸ್ಥರದ್ದಾಗಿದೆ.

ADVERTISEMENT

‘ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ಇಲ್ಲ. ಬೀಜ, ಗೊಬ್ಬರ, ಔಷಧಿ ಮತ್ತಿತರ ಕೃಷಿ ಸಲಕರಣೆಗಳಿಗೆ ಗುರುಮಠಕಲ್ ಪಟ್ಟಣಕ್ಕೆ ತೆರಳಬೇಕು. ಹೀಗಾಗಿ ಚಂಡರಕಿಯಲ್ಲಿಯೇ ರೈತ ಸಂಪರ್ಕ ಕೇಂದ್ರ ಇದ್ದರೆ ಅನುಕೂಲ ಆಗುತ್ತದೆ’ ಎನ್ನುವುದು ಗ್ರಾಮದ ರೈತರ ಅಭಿಪ್ರಾಯವಾಗಿದೆ.

ಗ್ರಾಮದಲ್ಲಿ ಅಂಚೆ ಕಚೇರಿ ಇದೆ. ಆದರೆ, ಅದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇದಕ್ಕೆ ಸ್ವಂತ ಕಟ್ಟಡ ಬೇಕಿದೆ.

‘30 ವರ್ಷಗಳಿಂದ ಗ್ರಾಮದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ಈಗ ಸಿಎಂ ಬರುತ್ತಾರೆ ಎನ್ನುವ ಕಾರಣದಿಂದ ಮುಖ್ಯವಾದ ರಸ್ತೆಯಲ್ಲಿ ಕಾಮಗಾರಿ ಆರಂಭಿಸಿದ್ದಾರೆ.
ಗ್ರಾಮದ ಒಳಗೂ ಅಭಿವೃದ್ಧಿ ಕಾರ್ಯ ಮಾಡಬೇಕು' ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು. ರೈತರ ಮತ್ತು ಮಹಿಳೆಯರ ಪರವಾಗಿ ಉತ್ತಮ ತೀರ್ಮಾನ ತೆಗದುಕೊಂಡಿದ್ದಾರೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಪ್ರಸವ ಪೂರ್ವ ಮತ್ತು ಹೆರಿಗೆ ನಂತರ ₹1000 ನೀಡುವ ಮಾತೃಶ್ರೀ ಯೋಜನೆ ಜಾರಿಗೆ ತಂದಿದ್ದಾರೆ. ಹೀಗಾಗಿ ಇಲ್ಲಿ ಒಂದು ಬ್ಯಾಂಕ್ ಮತ್ತು ಆಸ್ಪತ್ರೆ ಕಲ್ಪಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.