ADVERTISEMENT

ಯಾದಗಿರಿಯಲ್ಲಿ ರೈತ, ದಲಿತ, ಕಾರ್ಮಿಕ ಸಂಘಟನೆಗಳಿಂದ ಟ್ರ್ಯಾಕ್ಟರ್‌ ರ್‍ಯಾಲಿ

ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ರೈತ, ದಲಿತ, ಕಾರ್ಮಿಕ ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 1:38 IST
Last Updated 27 ಜನವರಿ 2021, 1:38 IST
ಯಾದಗಿರಿಯ ಸುಭಾಷ ವೃತ್ತದ ಬಳಿ ರೈತ, ದಲಿತ, ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಿದರು
ಯಾದಗಿರಿಯ ಸುಭಾಷ ವೃತ್ತದ ಬಳಿ ರೈತ, ದಲಿತ, ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಿದರು   

ಯಾದಗಿರಿ: ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ, ಖಾಸಗೀಕರಣ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ, ದಲಿತ, ಕಾರ್ಮಿಕ ಸಂಘಟನೆಗಳಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ನಗರ ಹೊರವಲಯದ ವಡಗೇರಾ ಕ್ರಾಸ್‌ ಮೂಲಕ ಸುಭಾಷ ವೃತ್ತದ ವರೆಗೆ ಟ್ರ್ಯಾಕ್ಟರ್‌, ಟಂಟಂ ಆಟೊ, ಸರಕು ಸಾಗಣೆ ವಾಹನದ ಮೂಲಕ ವಿವಿಧ ಸಂಘಟನೆಗಳ ಮುಖಂಡರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಟ್ರ್ಯಾಕ್ಟರ್ ಪೆರೇಡ್ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಸುಮಾರು ಐವತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್, ಟಂಟಂ ಆಟೊ, ಬೈಕ್‌, ಮೂಲಕ ಪೆರೇಡ್ ನಡೆಸಿದರು. ಪೊಲೀಸ್ ಬಿಗಿ ಭದ್ರತೆಯಲ್ಲಿ ಟ್ರ್ಯಾಕ್ಟರ್ ಪೆರೇಡ್ ನಡೆಸುವ ಮೂಲಕ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಕಾರ್ಮಿಕ ಮತ್ತು ಆಟೋ ಚಾಲಕರ ಸಂಘಟನೆಗಳು ಬೆಂಬಲ ನೀಡಿದವು.

ADVERTISEMENT

ಈ ವೇಳೆ ಸಂಘಟನೆಗಳ ಪ್ರಮುಖರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ದಲಿತ, ಕಾರ್ಮಿಕ, ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದು, ಇದು ಜನರಿಗೆ ಮಾರಣ ಶಾಸನವಾಗಿದೆ. ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು. ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ದೆಹಲಿಯಲ್ಲಿ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ 70ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ‌. ಇಷ್ಟಾದರೂ ಪ್ರಧಾನಿಯವರು ಕಾಯ್ದೆಗಳನ್ನು ಕೈಬಿಟ್ಟಿಲ್ಲ. ಜನರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ಅತಿದೊಡ್ಡ ಪ್ರತಿಭಟನಾ ಧರಣಿಯಾಗಿದೆ. ಕಾಯ್ದೆ ರದ್ಧತಿ ಕೇವಲ ಸಮಾಜ ಒಡೆದಾಳುವ ನೀತಿ.ರೈತರಿಗೆ ಮರಣ ಶಾಸನವಾಗಿದೆ ಎಂದರು.

ರೈತ ಸಂಘದ ಹಸಿರು ಶಾಲು, ಕಾರ್ಮಿಕರ ಸಂಘಟನೆಯ ಕೆಂಪು ಬಾವುಟ ಪ್ರತಿಭಟನೆ ವೇಳೆ ರಾರಾಜಿಸುತ್ತಿದ್ದವು.‌ ಪ್ರತಿಭಟನೆಯಲ್ಲಿಶರಣಗೌಡ ಗೂಗಲ್, ಎಸ್.ಎಂ.ಸಾಗರ, ದಾವಲಸಾಬ್ ನದಾಫ್, ಶರಣು ಮಂದರವಾಡ, ಜಯಕಾಂತ ತೋಟದ, ಗಾಲಿಬಸಾಬ ಬೆಳೆಗೇರಾ, ಚಂದ್ರಶೇಖರ ಚಾಮನಾಳ, ಹೊನ್ನೇಶ ಅನವಾರ, ಜಮಾಲಸಾಬ, ಗಣೇಶ ಅನವಾರ ಸೇರಿದಂತೆ ಆರ್‌ಕೆಎಸ್‌, ಸಿಐಟಿಯು, ರೈತ ಸಂಘ, ಹಸಿರು ಸೇನೆ, ಆಟೊ ಚಾಲಕರ ಸಂಘದ ಪ್ರಮುಖರುಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.