ಯಾದಗಿರಿ: ನಗರದಲ್ಲಿ ಅನಧಿಕೃತ ಶುದ್ಧ ನೀರಿನ ಘಟಕಗಳ ಹಾವಳಿ ಹೆಚ್ಚಿದ್ದು, ಅನಧಿಕೃತ ಘಟಕಗಳ ಸಂಖ್ಯೆಯೇ ಹೆಚ್ಚು ಇದೆ. ಒಂದೊಂದು ಪ್ರದೇಶದಲ್ಲೂ ಪರವಾನಗಿ ಪಡೆಯದ ನಾಲ್ಕು–ಐದು ಘಟಕಗಳಿವೆ. ಇದರಿಂದ ನಗರಸಭೆಯ ಆದಾಯಕ್ಕೂ ನಷ್ಟವಾಗಿದೆ.
ನಗರದ ಅಜೀಜ್ ಕಾಲೊನಿಯ ಮೆಟ್ರೋ, ಸಹರಾ ಕಾಲೊನಿಯ ನಿಬ್ರಾಸ್ ಮಿನರಲ್ ವಾಟರ್ ಘಟಕಗಳ ಮೇಲೆ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಘಟಕಗಳು ಪರವಾನಗಿ ಪಡೆಯದಿರುವ ಅಂಶ ಬೆಳಕಿಗೆ ಬಂದಿತ್ತು.
ಮನೆಗಳಲ್ಲಿ ಆರ್ಒ ಪ್ಲಾಂಟ್: ಕುಡಿಯುವ ನೀರಿನ ಘಟಕಗಳಿಗೆ ಪ್ರತ್ಯೇಕ ಕಟ್ಟಡ ಇರಬೇಕು. ಆದರೆ, ಮನೆಗಳಲ್ಲೇ ಆರ್ಒ ಪ್ಲಾಂಟ್ ಕಾರ್ಯ ನಿರ್ವಹಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಮನೆಯಲ್ಲೇ ಲಕ್ಷಾಂತರ ಲೀಟರ್ ಶುದ್ಧ ಕುಡಿಯುವ ನೀರು ತಯಾರಿಸಲಾಗುತ್ತಿದೆ.
‘ನೀರು ತಯಾರಿಸುವ ಘಟಕಗಳಲ್ಲಿ ಐಎಸ್ಐ ಮಾರ್ಕ್ ಇಲ್ಲದಿರುವುದು ಕಂಡು ಬಂದಿದೆ. ಆದರೆ, ಅವರಿಗೆ ಯಂತ್ರಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಇಲ್ಲ. ಅವರ ಕಾರ್ಯವ್ಯಾಪ್ತಿ ಮೀರಿ ಹೋಗಲು ಸಾಧ್ಯವಿಲ್ಲ. ಆಹಾರ ಸುರಕ್ಷತೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಮುಸ್ತಾಫ್ ತಿಳಸಿದರು.
‘ಅನಧಿಕೃತ ನೀರಿನ ಘಟಕಗಳ ಮೇಲೆ ದಾಳಿ ಮಾಡಿದ್ದೇವೆ. ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು, ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.