ADVERTISEMENT

ಶಹಾಪುರ: ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 13:19 IST
Last Updated 6 ಮೇ 2022, 13:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಹಾಪುರ (ಯಾದಗಿರಿ ಜಿಲ್ಲೆ): ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಈಚೆಗೆ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ.

ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಮೆಹರುನ್ನೀಸಾ ಸರ್ದಾರ್ ಪಟೇಲ್ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದವರು.

ಜನ್ಮ ನೀಡಿದ ಮಹಿಳೆಗೆ ಇದು ಮೂರನೇಯ ಹೆರಿಗೆ ಆಗಿದೆ. ಅವಳಿ ಮಕ್ಕಳು ಜನಿಸಬಹುದು ಎಂದು ವೈದ್ಯರು ನಿರೀಕ್ಷಿಸಿದ್ದರು. ತಾಯಿ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಸಿಬ್ಬಂದಿ ಉತ್ತಮ ಆರೈಕೆಯಿಂದ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿಕರ್ ತಿಳಿಸಿದರು.

ADVERTISEMENT

'ಮಹಿಳೆಯು ಮೊದಲು ಕಲಬುರಗಿ ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಹೆರಿಗೆ ನೋವು ಹೆಚ್ಚು ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆದರೆ, ಅಲ್ಲಿ ಚಿಕಿತ್ಸೆಗೆ ನಿರಾಕರಿಸಿದಾಗ ನಮ್ಮ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದರು. ಆ ವೇಳೆ ಅವರ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿ ಹೆರಿಗೆ ತೊಂದರೆ ಬಗ್ಗೆ ಮಾಹಿತಿ ನೀಡಲಾಯಿತು. ಸಿಬ್ಬಂದಿ ಸಹಕಾರದಿಂದ ಸಹಜ ಹೆರಿಗೆ ಆಯಿತು. ಎಂಟು ತಿಂಗಳಲ್ಲಿ ಹೆರಿಗೆ ಆಗಿದೆ. ಇದು ಒಂದು ಲಕ್ಷಕ್ಕೆ ಒಂದು ಪ್ರಕರಣದಲ್ಲಿ ಇಂತಹ ಹೆರಿಗೆ ಕಾಣುತ್ತೇವೆ. ಜನ್ಮ ನೀಡಿದ ಮೊದಲ ಮಗುವಿನ ತೂಕ 1.6 ಕೆ.ಜಿ, ಎರಡನೇಯ ಮಗು 1.7 ಕೆ.ಜಿ ಹಾಗೂ ಮೂರನೇಯ ಮಗುವಿನ ತೂಕ 1.3ಕೆ.ಜಿ ಇದೆ. ತ್ರಿವಳಿ ಮಕ್ಕಳನ್ನು ನಗರದಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಉಪಚರಿಸಲಾಗುತ್ತದೆ' ಎಂದು ಹೆರಿಗೆ ನಡೆಸಿದ ವೈದ್ಯೆ ಡಾ.ಸರೋಜ ಪಾಟೀಲ ಮಾಹಿತಿ ನೀಡಿದರು.

ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ತ್ರಿವಳಿ ಗಂಡು ಮಕ್ಕಳು ಜನಿಸಿರುವುದು

'ಪವಿತ್ರ ರಂಜಾನ್ ಹಬ್ಬದಲ್ಲಿ ನನಗೆ ಹೆರಿಗೆ ಆಗಿದೆ. ತುಂಬಾ ಖುಷಿ ಆಗಿದೆ. ನಾನು ಮತ್ತು ಮೂವರು ಮಕ್ಕಳು ಆರೋಗ್ಯವಾಗಿ ಇದ್ದೇವೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಆಸ್ಪತ್ರೆಯ ಸಿಬ್ಬಂದಿ ಉತ್ತಮ ಆರೈಕೆ ಮಾಡುತ್ತಿದ್ದಾರೆ. ನನಗೆ ಇದು ಮೂರನೇಯ ಹೆರಿಗೆ ಆಗಿದೆ. ಇದಕ್ಕೂ ಮೊದಲು ಗಂಡು ಮಗು ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದೆ' ಎಂದು ತಾಯಿ ಮೇಹರುನ್ನಿಸಾ ತಿಳಿಸಿದರು.

ಆಸ್ಪತ್ರೆಯ ಸಿಬ್ಬಂದಿಗಳಾದ ಅಮೃತಮ್ಮ, ಕಾವೇರಮ್ಮ, ಮಮತಾ, ಸುಭದ್ರಾ, ಮಲ್ಲಮ್ಮ ಇದ್ದರು.

***
ಇದು ಅಪರೂಪದ ಪ್ರಕರಣ. ಸಹಜ ಹೆರಿಗೆ ಆಗುವುದಿಲ್ಲ. ಸತತ ಪ್ರಯತ್ನಪಟ್ಟು ಸಹಜ ಹೆರಿಗೆ ಮಾಡಿದೆ. ಶಿಶುಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿದ್ದೇವೆ.
-ಡಾ.ಸರೋಜ ಪಾಟೀಲ,ಹೆರಿಗೆ ನಡೆಸಿದ ವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.