ಗುರುಮಠಕಲ್: ಎಲ್ಲಾ ಬಗೆಯ ಡಿಎಪಿ (ರಸಗೊಬ್ಬರ) ಬೆಲೆಯನ್ನು ಸರ್ಕಾರ ₹ 1,200 ಪ್ರತಿ ಚೀಲಕ್ಕೆ (50 ಕೆಜಿ) ಎಂದು ನಿಗದಿ ಮಾಡಿ ಆದೇಶ ನೀಡಿದೆ.
ಈ ಮೊದಲು ಸರ್ಕಾರದ ದರಪಟ್ಟಿ ಬರುವುದಕ್ಕಿಂತ ಮೊದಲು ಮಾರಾಟ ಮಾಡಿದ್ದು ಹೊರತುಪಡಿಸಿ, ಈ ದಾಸ್ತಾನಿನಲ್ಲಿರುವ ರಸಗೊಬ್ಬರವನ್ನು ಕಡ್ಡಾಯವಾಗಿ ನಿಗದಿತ ಬೆಲೆಗೆ ಮಾರಾಟ ಮಾಡಬೇಕು. ಹೆಚ್ಚಿನ ಹಣ ಪಡೆದದ್ದು ಕಂಡುಬಂದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ರಸಗೊಬ್ಬರ ಮಾರಾಟಗಾರರಿಗೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ರೈತರಿಗೆ ರಸಗೊಬ್ಬರ ದರದಲ್ಲಿ ಹೆಚ್ಚಳವಾಗಿತ್ತು. ಇದನ್ನು ತಪ್ಪಿಸಲು ಸರ್ಕಾರ ದರ ನಿಗದಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದೆ.
ಸಧ್ಯ ಕೋವಿಡ್-19 ಕಾರಣದಿಂದ ಬಯೋಮೆಟ್ರಿಕ್ ಮೂಲಕವಲ್ಲದೆ, ಆಧಾರ್ ಸಂಖ್ಯೆ ಜೋಡಣೆಯಿರುವ ಮೊಬೈಲ್ ನಂ.ಗೆ ಬರುವ ಒಟಿಪಿ ಮೂಲಕ ರಸಗೊಬ್ಬರ ವಿತರಿಸಲಾಗುತ್ತಿದೆ. ಬಿಲ್ಲಿಂಗ್ ಮಶಿನ್ ಸಮಸ್ಯೆಯಾದಲ್ಲಿ ಇಲಾಖೆ ನಿಗದಿ ಪಡಿಸಿದ ಜಿಎಸ್ಟಿಯ ಅಧಿಕೃತ ಬಿಲ್ ಮೇಲೆ ರಸೀದಿ ನೀಡಬೇಕು ಎಂದು ಹೇಳಿದರು.
ನೆರೆ ತಾಲ್ಲೂಕಿನ ರೈತರೂ ಸೇರಿದಂತೆ ತೆಲಂಗಾಣದಿಂದಲೂ ರೈತರು ಇಲ್ಲಿಗೆ ರಸಗೊಬ್ಬರ ಖರೀದಿಗೆ ಬರತ್ತಿದ್ದಾರೆ. ರೈತರು ಎಲ್ಲಿ ಬೇಕಾದರೂ ರಸಗೊಬ್ಬರ ಖರೀದಿ ಮಾಡಲು ಅವಕಾಶವಿದೆ. ಆದರೆ, ನಮ್ಮ ಭಾಗದ ರೈತರಿಗೆ ಮೊದಲ ಆದ್ಯತೆ ನೀಡುವ ಮೂಲಕ ರೈತರಿಗೆ ಸಮಸ್ಯೆಯದಂತೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ಬಾಲರಾಜ, ಸಹಾಯಕ ನಿರ್ದೇಶಕ ಗೌತಮ, ಸಹಾಯಕ ನಿರ್ದೇಶಕಿ (ಜಾರಿದಳ) ರೂಪಾ ಎಂ., ಸಂಜೀವಿನಿ ತಾತ್ರಿಕ ಸಹಾಯಕ ಶಿವಪುತ್ರ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್, ರೈತ ಸಂಪರ್ಕಕ ಕೇಂದ್ರದ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.