ಯಾದಗಿರಿ: ಭಾರತೀಯ ಜೈನ್ ಸಂಘದ ವತಿಯಿಂದ ನಡೆಯುತ್ತಿರುವ ನಗರದ ದೊಡ್ಡ ಕೆರೆ ನಾಲಾ ಹೂಳೆತ್ತುವ ಹಾಗೂ ವಿಸ್ತರಣೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಂಗಳವಾರ ಪರಿಶೀಲಿಸಿದರು.
ಯಾದಗಿರಿ ದೊಡ್ಡ ಕೆರೆ 12.53 ಎಂ.ಸಿ.ಎಫ್.ಟಿ ಸಾಮರ್ಥ್ಯ ಹೊಂದಿದ್ದು, ಸುಮಾರು 50 ಹೆಕ್ಟರ್ ನೀರಾವರಿ ಪ್ರದೇಶ ಹೊಂದಿರುತ್ತದೆ. ಸದರಿ ಕಾಮಗಾರಿಯಿಂದ ದೊಡ್ಡ ಕೆರೆಯ ಒಳ ಹರಿವು ಹೆಚ್ಚಾಗಲಿದೆ. 6 ವರ್ಷಗಳಿಂದ ಕೆರೆ ತುಂಬಿಲ್ಲ. ನಾಲಾ ಹೂಳೆತ್ತುವ ಕಾಮಗಾರಿ ನಿರ್ವಹಣೆಯಿಂದ ದೊಡ್ಡ ಕೆರೆ ತುಂಬುವ ಆಶಾಭಾವ ಇದೆ ಎಂದರು.
ನಾಲಾ ದಂಡೆ ಮೇಲೆ ಗಿಡಗಳನ್ನು ನೆಡಬೇಕು. ಚೆಕ್ಡ್ಯಾಂ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಣ್ಣ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಮಾಲಿಪಾಟೀಲ, ಕೃಷಿ ಇಲಾಖೆ ಉಪ ನಿರ್ದೇಶಕ ಸಮದ್ ಪಟೇಲ್, ಪೌರಾಯುಕ್ತ ಬಕ್ಕಪ್ಪ, ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಕೇದಾರನಾಥ, ಭಾರತೀಯ ಜೈನ್ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಅಜಿತ್ ಜೈನ್, ಬಿಜೆಎಸ್ ಜಿಲ್ಲಾ ಸಂಯೋಜಕ ರಾಜೇಶ ಜೈನ್, ಕಾರ್ಯದರ್ಶಿ ದಿನೇಶ ಜೈನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.