ಪ್ರಾತಿನಿಧಿಕ ಚಿತ್ರ
ಯಾದಗಿರಿ: ಇಲ್ಲಿನ ನಗರ ಸಭೆ ಸಮೀಪದ ರಸ್ತೆಯ ಬದಿಯಲ್ಲಿ ಬುಧವಾರ ರಾತ್ರಿ ಬಾವುಟ ಕಟ್ಟುವ ಸಂಬಂಧ ಎರಡು ಗುಂಪಿನ ನಡುವೆ ಗಲಾಟೆ ನಡೆದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ರಸ್ತೆಯ ಬದಿಯಲ್ಲಿ ಸೆಪ್ಟೆಂಬರ್ 2ರ ವರೆಗೆ ಬಾವುಟವನ್ನು ಕಟ್ಟಿ ಬಳಿಕ ಅದನ್ನು ತೆಗೆಯುವಂತೆ ಪೊಲೀಸರು ಒಂದು ಗುಂಪಿನ ಯುವಕರಿಗೆ ಸೂಚಿಸಿದ್ದರು. ನೀಡಿದ್ದ ಗಡುವು ಮುಗಿದಿದ್ದರೂ ಬಾವುಟವನ್ನು ಹಾಗೆಯೇ ಬಿಟ್ಟಿದ್ದರು. ಮತ್ತೊಂದು ಗುಂಪಿನ ಯುವಕರು ತಮ್ಮ ಬಾವುಟವನ್ನು ಕಟ್ಟಲು ಮುಂದಾದರು. ಈ ವೇಳೆ ಎರಡೂ ಗುಂಪಿನ ಯುವಕರ ನಡುವೆ ಗಲಾಟೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಗಲಾಟೆ ಆಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡೂ ಗುಂಪಿನವರನ್ನು ಚದುರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೆಲ ಯುವಕರಿಗೆ ತಿಳಿಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.