ADVERTISEMENT

ಯಾದಗಿರಿ | ‘ಮನಪರಿವರ್ತಿಸಿ ಕುಡಿತ ಬಿಡಿಸಿ’

ಗಾಂಧಿಸ್ಮೃತಿ, ಜನಜಾಗೃತಿ ಜಾಥಾ, ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:18 IST
Last Updated 11 ಅಕ್ಟೋಬರ್ 2025, 6:18 IST
ಯಾದಗಿರಿಯಲ್ಲಿ ಶುಕ್ರವಾರ ನಡೆದ ಗಾಂಧಿಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು  
ಯಾದಗಿರಿಯಲ್ಲಿ ಶುಕ್ರವಾರ ನಡೆದ ಗಾಂಧಿಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು     

ಯಾದಗಿರಿ: ‘ಕುಡಿತಕ್ಕೆ ದಾಸರಾದವರ ಮನಪರಿವರ್ತನೆ ಮಾಡಿ, ಮದ್ಯವ್ಯಸನದಿಂದ ಮುಕ್ತರನ್ನಾಗಿಸಿದರೆ ನೆಮ್ಮದಿಯ ಬದುಕು ನಡೆಸಬಹುದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿಶ್ವನಾಥರೆಡ್ಡಿ ಮುದ್ನಾಳ ಸಭಾಂಗಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮದ್ಯವರ್ಜನ ಶಿಬಿರಗಳಲ್ಲಿ ನೀಡುವ ತರಬೇತಿ ಸದ್ಬಳಕೆ ಆಗಬೇಕು. ಮಹಿಳೆಯರು ತಮ್ಮ ಮನೆಯಲ್ಲಿ ಕುಡಿತಕ್ಕೆ ಅಂಡಿಕೊಂಡ ಮಕ್ಕಳು, ಪತಿಯ ಚಟವನ್ನು ಮನಪರಿವರ್ತನೆ ಮಾಡಿ ಬಿಡಿಸಬೇಕು. ಕುಡಿತಕ್ಕೆ ದಾಸರಾದರೆ ಸಮಾಜದಲ್ಲಿ ಮರ್ಯಾದೆ ಇರುವುದಿಲ್ಲ. ಹೆಸರು ಕೂಗಿ ಕರೆಯುವ ಬದಲು ಕುಡುಕ ಎಂದು ಕರೆಯುತ್ತಾರೆ’ ಎಂದರು.

ADVERTISEMENT

‘ಕುಡಿತದ ಚಟವನ್ನು ಅಂಟಿಸಿಕೊಂಡವರು ಅದರಿಂದ ಮುಕ್ತರಾದರೆ ನಿಸ್ಸಂದೇಹವಾಗಿ ದೇಶ, ನಮ್ಮ ರಾಜ್ಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಹುದು. ಸಮಾಜದಲ್ಲಿಯೂ ಬದಲಾವಣೆ ತರಬಹುದು’ ಎಂದು ಹೇಳಿದರು.

‘ಕುಡಿತದ ಅಮಲು ಮನುಷ್ಯನನ್ನು ಕೆಟ್ಟದಾರಿಗೆ ಕರೆದೊಯ್ದು, ಕೆಟ್ಟವಿಚಾರಗಳನ್ನು ಮನಸ್ಸಿನಲ್ಲಿ ಮೂಡಿಸುತ್ತದೆ. ಇನ್ನೊಬ್ಬರನ್ನು ತುಳಿಯುವುದು, ಹೊಡೆಯುವಂತಹ ಕೆಟ್ಟ ವಿಚಾರಗಳಿಗೆ ಸ್ಫೂರ್ತಿ ಕೊಡುತ್ತದೆ’ ಎಂದರು.

ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ‘ಕುಡಿತ ಜೀವಕ್ಕೆ ಮಾರಕ ಮಾತ್ರವಲ್ಲ, ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡುತ್ತದೆ. ತಂದೆ ಮದ್ಯವ್ಯಸನಿ ಆಗಿದ್ದರೆ ಅದರ ದುಷ್ಪರಿಣಾಮ ಮಕ್ಕಳು ಮತ್ತು ಪತ್ನಿ ಮೇಲೂ ಬೀರುತ್ತದೆ’ ಎಂದು ಹೇಳಿದರು.

‘ಧರ್ಮಸ್ಥಳ ಸಂಸ್ಥೆಯು ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತರುತ್ತಿದೆ. ಮಹಿಳಾ ಸ್ವಸಹಾಯ ಸಂಘ–ಸಂಸ್ಥೆಗಳನ್ನು ಕಟ್ಟಿ ಆರ್ಥಿಕ ನೆರವು ನೀಡಿ, ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡಿದೆ’ ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಸುಭಾಷ್‌ಚಂದ್ರ ಕೌಲಗಿ ಮಾತನಾಡಿ, ‘ಧರ್ಮಸ್ಥಳದ ಹೆಸರು ಕೇಳಿದರೆ ಮನಸ್ಸಿನಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆ ಬರುತ್ತದೆ. ಧರ್ಮದಿಂದ ನಡೆಯುವುದನ್ನು ಶ್ರೀಕ್ಷೇತ್ರ ಕಲಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜಾಗೃತಿ ಜಾಥಾದಲ್ಲಿ ನೂರಾರು ಮಹಿಳೆಯರು, ವಿದ್ಯಾರ್ಥಿಗಳು ಪಾಲ್ಗೊಂಡರು. ಮದ್ಯ ಸೇವನೆ ತ್ಯಜಿಸಿದ್ದವರನ್ನು ಅಭಿನಂದಿಸಲಾಯಿತು. ವೃದ್ಯಾಪ್ಯ ಮಾಸಾಶನ ವಿತರಣೆ ಮಾಡಲಾಯಿತು.‌

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಅಧ್ಯಕ್ಷೆ ನಾಗರತ್ನ ಅನಪುರ, ಬಿಸಿ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ದಿನೇಶ್ ಪೂಜಾರಿ, ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ವಸಂತ್ ಬಿ, ಸ್ಕೌಟ್ ಆ್ಯಂಡ್ ಗೌಡ್ಸ್‌ನ ನಾಗರತ್ನ ಪಾಟೀಲ ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಶುಕ್ರವಾರ ನಡೆದ ಗಾಂಧಿಸ್ಮೃತಿ ಜನಜಾಗೃತಿ ಜಾಥಾ ಮತ್ತು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.