ADVERTISEMENT

ಯಾದಗಿರಿ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.29ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:28 IST
Last Updated 28 ಜನವರಿ 2026, 6:28 IST
   

ಯಾದಗಿರಿ: ಗುತ್ತಿಗೆ ಆಧಾರದಲ್ಲಿ ಸೇವೆ ಮಾಡುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ ವೇತನ, ಪ್ರೋತ್ಸಾಹ ಧನ, ವಿವಿಧ ಭತ್ಯೆಗಳ ಬಿಡುಗಡೆಗೆ ಆಗ್ರಹಿಸಿ ಮತ್ತು ವಿಳಂಬ ನೀತಿ ಖಂಡಿಸಿ ಅಖಿಲ ಕರ್ನಾಟಕ ಸಮುದಾಯ ಆರೋಗ್ಯ (ಎನ್‌ಎಚ್‌ಎಂ) ಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಗುರುವಾರ(ಜ.29)ರಂದು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರಿಗೆ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಂಘದ ಜಿಲ್ಲಾಘಟಕದ ಅಧ್ಯಕ್ಷ ಕ್ರಿಸ್ಟೋಫರ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೇತನ ಪಾವತಿಯಲ್ಲಿ ನಿರಂತರ ವಿಳಂಬ ಸರಿಪಡಿಸಿ ನಿಗದಿತ ವೇಳೆಗೆ ವೇತನ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಬೇಕು. 2024–25ನೇ ಸಾಲಿನ ನಾಲ್ಕು ತಿಂಗಳ ಪೂರ್ಣ ಪ್ರೋತ್ಸಾಹ ಧನ ಹಾಗೂ ವಿನಾಕಾರಣ ಪ್ರತಿ ತಿಂಗಳು ₹ 2,100 ಕಡಿತಗೊಳಿಸುತ್ತಿದ್ದು ಅವರ ಐದು ತಿಂಗಳು ಮೊತ್ತವನ್ನು ಪಾವತಿಸುವುದು, ಸಂಪೂರ್ಣ ಪ್ರೋತ್ಸಾಹ ಧನವನ್ನು ತಕ್ಷಣ ಪಾವತಿಸಬೇಕು’ ಎಂದು ಒತ್ತಾಯಿಸಿದರು.

‘ಬಾಕಿ ಇರುವ ಅರಿಯರ್ಸ್, ಬೋನಸ್, ಟಿಎ ಬಿಲ್ ಹಾಗೂ ಇಂಟರ್ನೆಟ್ ಬಿಲ್‌ಗಳು ಕೂಡಲೇ ಬಿಡುಗಡೆ ಮಾಡಬೇಕು. 16 ತಿಂಗಳುಗಳಿಂದ ಬಾಕಿ ಉಳಿದಿರುವ ಗ್ರೂಪ್–ಡಿ ನೌಕರರ ವೇತನ ನೀಡಬೇಕು, 2024–25ನೇ ಸಾಲಿನ ಆರೋಗ್ಯ ಮೇಳ ಮೊತ್ತ, ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಟ್ಟಡ ಬಾಡಿಗೆ ಹಣ ಬಿಡುಗಡೆ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿವರಿಗೆ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೋರಾಟ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಸಂಘದ ಪ್ರಧಾನ ಕಾರ್ಯದರ್ಶಿ ದುಂಡಪ್ಪ ಚವ್ಹಾಣ, ಕಾರ್ಯದರ್ಶಿ ಸಂದೀಪ ಕುಮಾರ, ಮೌನೇಶ್ವರ, ಇಮ್ಯಾನುವೆಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.