ADVERTISEMENT

ಯಾದಗಿರಿ| ಗಲಭೆ ಮಾಡಿದರೆ ಮುಲಾಜಿಲ್ಲದೆ ಪ್ರಕರಣ: ಡಿವೈಎಸ್‌ಪಿ ಸುರೇಶ್ ನಾಯಕ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:12 IST
Last Updated 11 ಜನವರಿ 2026, 6:12 IST
ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ ಶನಿವಾರ ಶಾಂತಿ ಸಭೆ ನಡೆಸಿದ ಅಧಿಕಾರಿಗಳು ಬಳಿಕ ಹೊನ್ನಕೆರೆ ವೀಕ್ಷಿಸಿದರು
ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ ಶನಿವಾರ ಶಾಂತಿ ಸಭೆ ನಡೆಸಿದ ಅಧಿಕಾರಿಗಳು ಬಳಿಕ ಹೊನ್ನಕೆರೆ ವೀಕ್ಷಿಸಿದರು   

ಯಾದಗಿರಿ: ‘ಮೈಲಾರಲಿಂಗೇಶ್ವರರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆಯ ಮಾರ್ಗದ ಮಧ್ಯದ ಕೆರೆ ಏರಿಯಲ್ಲಿ ಪೂಜೆ ಸಲ್ಲಿಸುವ ವೇಳೆ ಗಲಾಟೆ ಮಾಡಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದವರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಡಿವೈಎಸ್‌ಪಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಶನಿವಾರ ಮೈಲಾಪುರ, ಹಳಿಗೇರಾ, ರಾಮಸಮುದ್ರ, ಹೊಸಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಮುಖಂಡರೊಂದಿಗೆ ಶಾಂತಿ ಸಭೆ ಮಾಡಿ, ಅವರು ಮಾತನಾಡಿದರು.

‘ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದರೆ ಲಾಠಿ ಚಾರ್ಜ್‌ ಮಾಡಬೇಕಾಗುತ್ತದೆ. ಅಂತಹುದಕ್ಕೆ ಅವಕಾಶ ಕೊಡದೆ ಪೊಲೀಸರಿಗೆ ಸಹಕಾರ ನೀಡಬೇಕು. ಎಲ್ಲ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿ, ನಿಗಾ ಇರಿಸಲಾಗುವುದು. ನಿಮ್ಮ ಗ್ರಾಮಗಳ ಯುವಕರಿಗೆ ಶಾಂತಿ ಭಂಗ ಮಾಡದಂತೆ ತಿಳಿಹೇಳಿ’ ಎಂದು ಸೂಚಿಸಿದರು.

ADVERTISEMENT

‘ಪ್ರತಿಯೊಂದು ಗ್ರಾಮದವರಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಲು ಅವಕಾಶ ಕೊಡಲಾಗುವುದು. ಯಾವ ಗ್ರಾಮಗಳಿಂದ ಯಾರು ಪೂಜೆ ಸಲ್ಲಿಸಲು ಬರುತ್ತಾರೆ ಎಂಬುದನ್ನು ಹೆಸರುಗಳನ್ನು ಕೊಡಬೇಕು. ಪಿಎಸ್‌ಐ ಅವರು ಪ್ರತಿ ಗ್ರಾಮಗಳ ಮುಖಂಡರ ಜೊತೆಗೆ ಪ್ರತ್ಯೇಕ ಸಭೆ ಮಾಡುತ್ತಾರೆ. ಅವರಿಗೆ ಮಾಹಿತಿ ನೀಡಿ’ ಎಂದು ಹೇಳಿದರು.

ತಹಶೀಲ್ದಾರ್‌ ಸುರೇಶ ರಾಣಪ್ಪ ಅಂಕಲಗಿ ಮಾತನಾಡಿ, ‘ಗ್ರಾಮಗಳ ಮುಖಂಡರು ಚರ್ಚಿಸಿ, ಒಮ್ಮತದಿಂದ ಪೂಜೆ ಸಲ್ಲಿಸವರ ಹೆಸರುಗಳನ್ನು ಪೊಲೀಸರಿಗೆ ನೀಡಬೇಕು. ಗಲಭೆಗಳಿಗೆ ಅವಕಾಶ ಮಾಡಿಕೊಡದೆ ಶಾಂತಿಯಿಂದ ಜಾತ್ರೆ ನಡೆಯುವಂತೆ ಆಗಲಿ’ ಎಂದು ಹೇಳಿದರು.

‘ಮೈಲಾರಲಿಂಗೇಶ್ವರ ಈ ಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ. ಹೊರಗಿನಿಂದ ಅಸಂಖ್ಯಾತ ಭಕ್ತರು ಬರುತ್ತಾರೆ. ಸ್ಥಳೀಯರಿಂದ ಕಹಿ ಘಟನೆಗಳು ನಡೆದು ಹೊರಗಿನವರಿಗೆ ಹೊರೆಯಾಗಬಾರದು. ಪೊಲೀಸರ ತಾಳ್ಮೆಯನ್ನು ಪರೀಕ್ಷಿಸದೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು’ ಎಂದರು.

ಪಿಎಸ್‌ಐ ಹನುಮಂತ ಬಂಕಲಿಗಿ ಮಾತನಾಡಿ, ‘ಉತ್ಸವ ಮೂರ್ತಿ, ಪಲ್ಲಕ್ಕಿ ಹೊರುವವರು ಒಂದೇ ತರಹದ ಬಟ್ಟೆಗಳನ್ನು ಧರಿಸಿದರೆ ದೇವರ ಸೇವಾದಾರರು ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸಾಮಾನ್ಯರೆಂದು ಹಿಂದಕ್ಕೆ ತಳ್ಳಬೇಕಾಗುತ್ತದೆ’ ಎಂದು ಹೇಳಿದರು. 

‘ಕಳೆದ ವರ್ಷ ನಡೆದಂತೆ ಈ ವರ್ಷವೂ ಗಲಾಟೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಅನುಚಿತವಾಗಿ ವರ್ತಿಸಿದ್ದು ಕಂಡುಬಂದರೆ ಪ್ರತಿಯೊಬ್ಬರ ಮೇಲೂ ಕೇಸ್ ದಾಖಲಿಸುತ್ತೇವೆ. ಜನರು ಓಡಾಡದಂತೆ ಮನೆಗಳ ಮುಂದೆ ಅಂಗಡಿಗಳನ್ನು ಹಾಕಲು ಅವಕಾಶ ಕೊಟ್ಟರೂ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿ ವರ್ಷ ಎಚ್ಚರಿಕೆ ಕೊಟ್ಟರೂ ತಿದ್ದಿಕೊಳ್ಳುತ್ತಿಲ್ಲ. ಈ ಬಾರಿ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಸಿದರು.

ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ ಶನಿವಾರ ನಡೆದ ಶಾಂತಿ ಸಭೆಯಲ್ಲಿ ಮುಖಂಡರೊಬ್ಬರು ಮಾತನಾಡಿದರು
ಎಲ್ಲರೂ ಸೇರಿ ಮಲ್ಯಯ್ಯನ ಜಾತ್ರೆ ಮಾಡೋಣ. ಗಲಾಟೆಗಳಿಗೆ ಅಸ್ಪದಕೊಡದೆ ಪೊಲೀಸರಿಗೆ ಪ್ರತಿಯೊಬ್ಬರು ಸಹಕಾರ ಕೊಡೋಣ  
ಖಂಡಪ್ಪ ಪೂಜಾರ ಮೈಲಾಪುರದ ಮುಖಂಡ 
Quote - ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ತಾಲ್ಲೂಕು ಆಡಳಿತವೂ ಕೆರೆಯ ಏರಿಯ ಉದ್ದಕ್ಕೂ ಬಂಬೂಗಳನ್ನು ಕಟ್ಟಬೇಕು  
ನಾಗಣ್ಣಗೌಡ ಹಳಿಗೇರಾ ಮುಖಂಡ
Quote - ಕೆರೆಯ ಬಳಿ ರಾಮಸಮುದ್ರ ಗ್ರಾಮಸ್ಥರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಯಾವುದೇ ಅಡ್ಡಿ ಮಾಡದಂತೆ ಪೂಜೆಗೆ ಅವಕಾಶ ಕೊಡಬೇಕು
ಮಲ್ಲಿಕಾರ್ಜುನ ರಾಮಸಮುದ್ರ ಮುಖಂಡ

ಉತ್ಸವ ಮೂರ್ತಿ ಗರ್ಭ ಗುಡಿ ಸೇರುವವರೆಗೆ ಭದ್ರತೆ ನೀಡಿ

‘ಪುಣ್ಯಸ್ನಾನ ಮಾಡಿ ಸರಪಳಿ ಹರಿದು ಪಲ್ಲಕ್ಕಿ ಉತ್ಸವ ಮೂರ್ತಿ ಗರ್ಭ ಗುಡಿ ಸೇರುವವರೆಗೂ ಪೊಲೀಸರು ಪಲ್ಲಕ್ಕಿ ಮತ್ತು ಕುದುರೆಗೆ ಭದ್ರತೆ ಒದಗಿಸಬೇಕು’ ಎಂದು ಮೈಲಾಪುರದ ಬಸವರಾಜ ಪೂಜಾರಿ ಕೋರಿದರು. ‘ಪುಣ್ಯಸ್ನಾನ ಮಾಡಿ ಬೆಟ್ಟಡ ಮೆಟ್ಟಿಲುಗಳಲ್ಲಿ ಸರಪಳಿ ಹರಿಯುತ್ತಿದ್ದಂತೆ ಪೊಲೀಸರು ಹೊರಟು ಹೋಗುತ್ತಾರೆ. ಬೆಟ್ಟ ಹತ್ತಿ ದೇವಸ್ಥಾನದ ಸುತ್ತುವಾಗ ಒಬ್ಬ ಪೊಲೀಸರು ಇರುವುದಿಲ್ಲ. ನಮಗೆ ಆಗುವ ಕಷ್ಟ ಹೇಳತೀರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.