ಯಾದಗಿರಿ: ‘ಭಾವೈಕ್ಯಕ್ಕೆ ಯಾದಗಿರಿ ಜಿಲ್ಲೆ ಹೆಸರುವಾಸಿಯಾಗಿದೆ. ಗಣೇಶ ಚತುರ್ಥಿ ವೇಳೆ ಕಳೆದ 10 ವರ್ಷಗಳಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಿ ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಹಿಂದೂ–ಮುಸ್ಲಿಂ ಸಮುದಾಯದವರು ಶಾಂತ– ಸೌಹಾರ್ದದಿಂದ ಆಚರಿಸಬೇಕು’ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆಯ ಯಾದಗಿರಿ ನಗರ ಪೊಲೀಸ್ ಠಾಣೆಯು ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
‘ಗಣೇಶ ಮತ್ತು ಈದ್ ಹಬ್ಬಗಳು ಒಟ್ಟಿಗೆ ಬಂದಿವೆ. ಎರಡೂ ಹಬ್ಬಗಳು ಉಭಯ ಸಮುದಾಯಗಳಿಗೆ ಮಹತ್ವದಾಗಿದೆ. ಮುಂದಿನ 15 ವರ್ಷಗಳವರೆಗೆ ಈ ಹಬ್ಬಗಳು ಒಟ್ಟಿಗೆ ಬರುವುದಿಲ್ಲ. ಈ ಬಾರಿ ಪೊಲೀಸರಿಗೆ ಹೆಚ್ಚಿನ ಜವಾಬ್ದಾರಿಯಿದೆ. ಎರಡೂ ಸಮುದಾಯದವರು ಪೊಲೀಸರಿಗೆ ಸಹಕಾರ ಕೊಟ್ಟು ಶಾಂತಿ ಮತ್ತು ಸಂಭ್ರಮದಿಂದ ಹಬ್ಬ ಆಚರಿಸಬೇಕು’ ಎಂದರು.
‘ಹಬ್ಬದ ಸಂಭ್ರಮದ ಜತೆಗೆ ಜೀವದ ಸುರಕ್ಷತೆಯೂ ಮುಖ್ಯವಾಗುತ್ತದೆ. ಡಿಜೆ ಮೇಲೆ ಕುಳಿತು ವಿದ್ಯುತ್ ತಂತಿ ತಗುಲಿ ಜೀವ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಮೂರ್ತಿ ವಿಸರ್ಜನೆಯ ವೇಳೆ ಅವಸರದಲ್ಲಿ ಕಾಲು ಜಾರಿ ಬಿದ್ದಿರುವುದು ಇದೆ. ಅಹಿತಕರ ಘಟನೆಗಳಿಗೆ ಅಸ್ಪದ ಕೊಡದಂತೆ ಹಬ್ಬ ಸಂಭ್ರಮಿಸಬೇಕು. ಪೊಲೀಸ್ ಇಲಾಖೆಯೂ ನಿಮಗೆ ಅಗತ್ಯ ಸಹಕಾರ ಕೊಡಲಿದೆ’ ಎಂದು ಹೇಳಿದರು.
ನಗರಸಭೆ ಆಯುಕ್ತ ಉಮೇಶ ಚವ್ಹಾಣ್ ಮಾತನಾಡಿ, ‘ಹಬ್ಬಗಳ ಆಚರಣೆಗೆ ನಗರ ಸಭೆಯು ಎಲ್ಲ ರೀತಿಯಿಂದಲೂ ಸಹಕಾರ ಕೊಡಲಿದೆ. ನಗರಸಭೆಯ ಅನುಮತಿ ಪಡೆದು, ನಿಯಮಗಳನ್ನು ಪಾಲಿಸಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು’ ಎಂದರು.
ಜೆಸ್ಕಾಂ ಅಧಿಕಾರಿ ಮಾರ್ಕಂಡೇಶ್ವರ ಮಾತನಾಡಿ, ‘ವಿದ್ಯುತ್ ತಂತಿಯ ಮಾರ್ಗದ ಕೆಳಗಡೆ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು. ಹಳೇ ವೈರ್ಗಳ ಬದಲು ಹೊಸ ವೈರ್ಗಳನ್ನು ಬಳಸಬೇಕು. ಪೊಲೀಸ್ ಠಾಣೆಯಲ್ಲಿ ಜೆಸ್ಕಾಂ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪರವಾನಗಿಯೊಂದಿಗೆ ವಿದ್ಯುತ್ ಶುಲ್ಕವನ್ನು ಪಾವತಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.
ಡಿಎಸ್ಪಿ ಸುರೇಶ ನಾಯಕ, ಸಿಪಿಐ ಸುನಿಲ್ ಕುಮಾರ್, ಭಾವೈಕ್ಯತೆ ಸಮಿತಿ ಸದಸ್ಯರಾದ ವಿಶ್ವನಾಥ ಶಿರವಾಳ, ಶರಣಪ್ಪ ಗುಳಗಿ, ಶರಣಪ್ಪ ಜಾಕಾ, ಮುಸ್ಲಿಂ ಸಮುದಾಯದ ಮುಖಂಡರಾದ ಹಫೀಜ್ ಪಟೇಲ್, ವಾಹೀದ್ ಮಿಯಾನ್, ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಭೀಮಣ್ಣ ಮೇಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಯಾದಗಿರಿ ಶಾಂತಿಗೆ ಹೆಸರುವಾಗಿದೆ. ದ್ವೇಷಕ್ಕೆ ಅಸ್ಪದವಿಲ್ಲದೆ ಎಲ್ಲರೊಂದಿಗೆ ಪ್ರಿತಿ ಸಂತೋಷದಿಂದ ಹಬ್ಬಗಳನ್ನು ಆಚರಣೆ ಮಾಡಿ ಪೊಲೀಸರಿಗೂ ಸಹಕರಿಸೋಣ ಸಂದಾನಿಮುಸಾ ಮುಸ್ಲಿಂ ಸಮುದಾಯದ ಮುಖಂಡ
ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸಿ ಶಾಂತಿಯಿಂದ ಹಬ್ಬಗಳನ್ನು ಆಚರಣೆ ಮಾಡೋಣ. ಪರಿಸರಕ್ಕೂ ಹಾನಿಯಾಗದಂತೆ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡೋಣಮರೆಪ್ಪ ಚಟ್ಟೇರಕರ್ ದಲಿತ ಸಮುದಾಯದ ಮುಖಂಡ
ಯಾದಗಿರಿ ನಗರ ಶಾಂತಿ ಇರುವಂತಹದ್ದು. ಯಾವುದೇ ಸಮುದಾಯಕ್ಕೆ ತೊಂದರೆ ಕೊಡದೆ ಸೌಹಾರ್ದದಿಂದ ಹಬ್ಬವನ್ನು ಆಚರಣೆ ಮಾಡಬೇಕುಬಾಬು ದೋಖಾ ಭಾವೈಕ್ಯತೆ ಸಮಿತಿ ಅಧ್ಯಕ್ಷ
‘ಸೂಕ್ಷ್ಮವಾದ ಒಂದು ಪ್ರದೇಶದಲ್ಲಿ ನಿಷೇಧಾಜ್ಞೆ ಹೊರಡಿಸುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗಿದೆ. ಗಲಾಟೆಗಳು ನಡೆದರೆ ಮುಂದಿನ ಬಾರಿ ಮೂರ್ತಿಗಳನ್ನು ಕೂರಿಸಲು ಅವಕಾಶ ಕೊಡದೆ ನಿಷೇಧಾಜ್ಞೆ ಹೊರಡಿಸಬೇಕಾಗುತ್ತದೆ’ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಎಚ್ಚರಿಸಿದರು. ‘ಪ್ರತಿಯೊಂದು ಹಬ್ಬದ ಹಿಂದೆ ಸ್ಪಷ್ಟ ಉದ್ದೇಶ ವ್ಯಕ್ತಿಯ ಚಿಂತನೆ ಇರುತ್ತದೆ. ಅದನ್ನು ಗೌರವಿಸಬೇಕು. ಸಣ್ಣ–ಪುಟ್ಟ ಗಲಾಟೆಗಳು ನಡೆದರೆ ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು. ನಿಮ್ಮದೆಯಾದ ಸ್ವಯಂಸೇವಕರನ್ನು ನಿಯೋಜನೆ ಮಾಡಿಕೊಂಡು ಭದ್ರತೆಗೆ ನಿಯೋಜನೆಯಾದ ಪೊಲೀಸರಿಗೆ ಸಹಕಾರ ಕೊಡಬೇಕು. ಇನ್ನೊಬ್ಬರಿಗೆ ತೊಂದರೆ ಆಗದಂತೆ ಹಬ್ಬವನ್ನು ಆಚರಣೆ ಮಾಡಿ ಮುಖ್ಯವಾಗಿ ಶಾಂತಿಯನ್ನು ಕಾಪಾಡಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.