
ಪ್ರಾತಿನಿಧಿಕ ಚಿತ್ರ
ಯಾದಗಿರಿ: ‘ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಯಾದಗಿರಿ ವತಿಯಿಂದ ನಗರದಲ್ಲಿ ಜನವರಿ 31ರಂದು ವಿರಾಟ್ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಸಮ್ಮೇಳನದ ಅಧ್ಯಕ್ಷ ರಾಜಶೇಖರ್ ಬಾಪೂರೆ ಹೇಳಿದರು.
‘ಅಂದು ಮಧ್ಯಾಹ್ನ 2.30ಕ್ಕೆ ಮೈಲಾಪುರ ಬೇಸ್ನ ಹನುಮಾನ ದೇವಸ್ಥಾನದ ಸಮೀಪ ಶೋಭಾಯಾತ್ರೆ ಆರಂಭವಾಗಿ, ಸಂಜೆ 5ಕ್ಕೆ ವನಕೇರಿ ಲೇಔಟ್ ಬಳಿಯ ಬಾಲಾಜಿ ಮಂದಿರ ತಲುಪಲಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವಿಶ್ವಕರ್ಮ ಏಕದಂಡಗಿ ಮಠದ ರವೀಂದ್ರ ಸ್ವಾಮೀಜಿ, ಹೆಡಗಿಮದ್ರಾ ಶಾಂತ ಶಿವಯೋಗೇಶ್ವರ ಸಂಸ್ಥಾನ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸೊಪ್ಪಿ ಬಸವೇಶ್ವರ ಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ ಅವರು ದಿಕ್ಸೂಚಿ ಭಾಷಣ ಮಾಡುವರು’ ಎಂದರು.
‘ಶೋಭಾ ಯಾತ್ರೆಯಲ್ಲಿ ಭಾರತ ಮಾತೆಯ ಭಾವಚಿತ್ರ, ಹಿಂದೂ ಧರ್ಮದ ಸರ್ವ ಸಮಾಜದ ಮಹಾಪುರುಷರ, ಶರಣರ ಭಾವಚಿತ್ರಗಳ ಮೆರವಣಿಗೆ ಇರಲಿದೆ. ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪ್ರದರ್ಶನ ನೀಡಲಿವೆ. ಮೈಲಾಪುರ ಬೇಸ್, ಶಿವಾಜಿ ವೃತ್ತ, ಗಾಂಧಿ ಚೌಕ್, ವೀರಶೈವ ಕಲ್ಯಾಣ ಮಂಟಪ, ಬಾಬು ಜಗಜೀವನರಾಂ ವೃತ್ತ, ಕನಕ ವೃತ್ತ ಮಾರ್ಗವಾಗಿ ಬಾಲಾಜಿ ದೇವಸ್ಥಾನರಸ್ತೆ ಮೂಲಕ ವನಕೇರಿ ಲೇಔಟ್ ತಲುಪಲಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸಂಚಾಲಕ ಬಸವಕುಮಾರ ಯಾದವ್, ಉಪಾಧ್ಯಕ್ಷ ವೆಂಕಯ್ಯ ಶೆಟ್ಟಿ, ಕಾರ್ಯದರ್ಶಿ ಆಕಾಶ್ ಬೀರನೂರ, ಕೋರ್ ಕಮಿಟಿ ಸದಸ್ಯರಾದ ಸಾಬು ಚಂಡ್ರಿಕಿ, ಮಲ್ಲು ಕೋಲಿವಾಡ, ಸುರೇಶ ಅಂಬಿಗೇರ, ತುಳಸಿದಾಸ ಪತಂಗೆ, ಅಮರೇಶ್ ಅನಸೂಗೂರು, ಶ್ರೀವು ಸುಖಲೂರು, ಅಶ್ವಿನ್ ಪಾಚಾರ್ಯ, ಜಿತೇಂದ್ರ ನವಗಿರಿ, ರಮೇಶ್ ಪೂಜಾರಿ, ಮಹೇಶ ಕುಮಾರ, ಶಿವು ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.