ಯಾದಗಿರಿ: ನಗರದಲ್ಲಿ ಸೋಮವಾರ ಸುರಿದ ಬಿರುಸಿನ ಮಳೆಗೆ ರಸ್ತೆಯ ಮೇಲೆ ನೀರು ಹರಿದಾಡಿತು.
ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಸಮೀಪ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣಮಾಡಿದ್ದು, ನೀರು ಹರಿದು ಹೋಗದ ಕಾರಣ ರಸ್ತೆಯ ಮೇಲೆ ಒಂದು ಅಡಿ ನೀರು ನಿಂತಿತು.
ಶಾಸ್ತ್ರಿ ವೃತ್ತದಿಂದ ಎಲ್ಐಸಿ ಕಚೇರಿ, ಹೊಸ ಬಸ್ ನಿಲ್ದಾಣ ಸಮೀಪದ ತನಕ ನೀರು ಹರಿಯಿತು. ಇದರಿಂದ ವಾಹನ ಸವಾರರು ಪರದಾಡುವಂತೆ ಆಯಿತು.
ಬೈಕ್ ಸವಾರರು ನೀರಿನಲ್ಲೇ ಹರಸಾಹಸಪಟ್ಟು ವಾಹನ ಚಲಾಯಿಸಿದರು. ಇನ್ನೂ ಪಾದಚಾರಿಗಳು ನಡೆದುಕೊಂಡು ಹೋಗಲು ನೀರು ಅಡ್ಡಿಯಾಗಿತ್ತು.
ನಂತರ ನಗರಸಭೆ ವತಿಯಿಂದ ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿಯಲು ದಾರಿ ಮಾಡಿದ ಮೇಲೆ ರಸ್ತೆ ಮೇಲೆ ನೀರು ಕಡಿಮೆಯಾಯಿತು.
ಇನ್ನೂ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲೂ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತೆ ಆಗಿತ್ತು. ನಗರದ ವಿವಿಧ ಕಡೆಯೂ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು.
ಬಿರುಸಿನ ಮಳೆ:ಮಧ್ಯಾಹ್ನ 3.30ಕ್ಕೆ ಆರಂಭವಾಗದ ಬಿರುಸಿನ ಮಳೆ ಸುಮಾರು 20 ನಿಮಿಷ ಎಡೆಬಿಡದೇ ಸುರಿಯಿತು. ಇದರಿಂದ ಬಡಾವಣೆಗಳ ರಸ್ತೆಗಳಲ್ಲೂ ನೀರು ಹರಿಯಿತು.
ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಕೆಲವೊತ್ತು ಬಿಸಿಲಿನ ವಾತಾವರಣ ಇತ್ತು.
ಜಿಲ್ಲೆಯ ವಿವಿಧೆಡೆಯೂ ಉತ್ತಮವಾಗಿ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.