ಬಳಿಚಕ್ರ (ಸೈದಾಪುರ): ಅಧಿಕ ಮಳೆ ಹಾಗೂ ತಂಪು ವಾತಾವರಣದಿಂದ ಹೆಸರು ಬೆಳೆಗೆ ಹಳದಿ ರೋಗ ಬರುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಲು ರೈತರು ಸಮಯಕ್ಕೆ ಸರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಳಿಚಕ್ರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಯಪ್ಪ ತಿಳಿಸಿದರು.
ಸಮೀಪದ ಬಳಿಚಕ್ರ ಹೋಬಳಿ ವ್ಯಾಪ್ತಿಯಲ್ಲಿನ ಹಳದಿ ರೋಗ ಬಾಧಿತ ರೈತರ ಹೊಲಗಳಿಗೆ ಭೇಟಿ ನೀಡಿ, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಹೆಸರು ಮೂರು ವಾರಗಳ ಬೆಳವಣಿಗೆ ಹಂತದ ಸಮಯದಲ್ಲಿಯೇ ಹಳದಿ ರೋಗದ ಕಾಟ ಶುರುವಾಗಿದೆ. ಬಳಿಚಕ್ರ ಹೋಬಳಿಯ ವಿವಿಧ ಭಾಗದಲ್ಲಿ ಹೆಸರು ಬೆಳೆಗೆ ಕೀಟಗಳ ಕಾಟದ ಜೊತೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.
ಹತೋಟಿ ಕ್ರಮಗಳು: ರೋಗಕ್ಕೆ ತುತ್ತಾದ ಗಿಡಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು. ಪ್ರತಿ ಎಕರೆಗೆ 8-10 ಹಳದಿ ಅಂಟು ಬಲೆಗಳನ್ನು ಅಳವಡಿಸಬೇಕು. ಒಂದು ಮಿ.ಲೀ ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿಗೆ ಅಥವಾ ಇಮಿಡಾಕ್ಲೋಪ್ರಿಡ್ 0.5 ಮಿ. ಲೀ. ಯನ್ನು ಒಂದು ಲೀಟರ್ ನೀರಿಗೆ ಅಥವಾ ಅಸಿಟಾಮಿಪ್ರಿಡ್ 20 ಎಸ್ ಪಿ 0.3 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಥಯೋಮೆತಾಕ್ಷಂ 25ಡಬ್ಲೂವ್ 0.3 ಗ್ರಾಂ/ಲೀಟರ್ ನೀರಿಗೆ (3 ಗ್ರಾಂ/10 ಲೀಟರ್ ನೀರಿಗೆ ) ಬೆರೆಸಿ ಸಿಂಪರಣೆ ಮಾಡಬೇಕು. ಈ ಮೇಲಿನ ಯಾವುದಾದರೂ ಒಂದು ಕೀಟನಾಶಕ ಮಾತ್ರ ಸಿಂಪರಣೆ ಮಾಡಬೇಕು. ಅವಶ್ಯಕತೆ ಇದ್ದರೆ 10 ದಿನಗಳ ನಂತರ ಮತ್ತೊಂದು ಸಿಂಪರಣೆ ಮಾಡಬೇಕು ಎಂದರು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ರೈತರಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.