ಶಹಾಪುರ: ‘ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ. ಯಾವ ಮಗುವೂ ಶಿಕ್ಷಣದಿಂದ ವಂಚಿಗೊಳ್ಳಬಾರದು. ನೀವು ಕೂಲಿ ಕಾರ್ಮಿಕರು ಆಗಿದ್ದು ಸಾಕು. ಮುಂದೆ ನಿಮ್ಮ ಮಕ್ಕಳು ಕೂಲಿ ಕಾರ್ಮಿಕರು ಆಗಬಾರದು’ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ನ್ಯಾಯಾಧೀಶ ಸಿದ್ದರಾಮ ಟಿ.ಪಿ. ತಿಳಿಸಿದರು.
ನಗರದ ವಕೀಲರ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಕಚೇರಿ, ಕಾರ್ಮಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರೂ ಸಾಕ್ಷರರಾದರೆ ಸಾಲದು, ಕನಿಷ್ಠ ಕಾನೂನು ಜ್ಞಾನ ಸಂಪಾದಿಸಿಕೊಳ್ಳಬೇಕು. ಯಾರು ಕಾನೂನು ಗೌರವಿಸುತ್ತಾರೋ ಅವರಿಗೆ ಕಾನೂನು ಸದಾ ರಕ್ಷಣೆ ನೀಡುತ್ತದೆ’ ಎಂದರು.
ನ್ಯಾಯಾಧೀಶೆ ಶೋಭಾ, ಎಪಿಪಿ ದಿವ್ಯಾರಾಣಿ ನಾಯಕ ಸುರಪುರ, ಮರೆಪ್ಪ ಹೊಸಮನಿ, ರಿಯಾಜ್ ಪಟೇಲ್, ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ, ಉಪಾಧ್ಯಕ್ಷ ಜೈಲಾಲ ತೋಟದಮನೆ, ಕಾರ್ಮಿಕರ ನಿರೀಕ್ಷಕಿ ಪ್ರಿಯಾಂಕ ಬಾಸುತ್ಕರ್, ಸಂತೋಷ ಕುಮಾರ, ಬಿ.ಎಂ.ರಾಂಪುರೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.