ಉಡುಪಿ: ಕ್ವಿಜ್ ಮಾಸ್ಟರ್ ಪ್ರಶ್ನೆಗಳನ್ನು ಕೇಳಿ ಮುಗಿಸುವ ಮುನ್ನವೇ ಉತ್ತರಗಳು ತೂರಿ ಬರುತ್ತಿದ್ದವು. ಕಠಿಣ ಪ್ರಶ್ನೆಗಳಿಗೂ
ನಾ ಮುಂದು, ತಾ ಮುಂದು ಎಂದು ವಿದ್ಯಾರ್ಥಿಗಳು ಮುಗಿಬಿದ್ದು ಉತ್ತರ ಕೊಟ್ಟರು. ಕೊನೆಯ ಕ್ಷಣದವರೆಗೂ ಕುತೂಹಲ, ಕಾತರ, ತಳಮಳ ಹಾಗೂ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಿದ್ದ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ ವಿದ್ಯಾರ್ಥಿಗಳ ಜ್ಞಾನದ ಪರಿಧಿಯನ್ನು ವಿಸ್ತರಿಸಿತು.
ನಗರದ ವಿದ್ಯೋದಯ ಪಬ್ಲಿಕ್ ಶಾಲೆಯ ವಿಶ್ವೇಶತೀರ್ಥ ರಂಗಮಂದಿರದಲ್ಲಿ ಗುರುವಾರ ನಡೆದ ‘ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್’ ರಸಪ್ರಶ್ನೆ ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಯಿತು. ಜಿಲ್ಲೆಯ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದಲೂ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಸರಿ ಉತ್ತರಗಳನ್ನು ನೀಡಿ ಪ್ರಜ್ಞಾನ್ ಶೆಟ್ಟಿ ಹಾಗೂ ರೇವನ್ ಕಾರ್ಯಕ್ರಮ ಉದ್ಘಾಟಿಸುವ ಅವಕಾಶ ಗಿಟ್ಟಿಸಿಕೊಂಡರು. ಕಾರ್ಯಕ್ರಮಕ್ಕೂ ಮುನ್ನ ಕೃಷ್ಣೈಕ್ಯರಾದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳಿಗೆ ಸಂತಾಪ ಸೂಚಿಸಲಾಯಿತು.
ಮೊದಲ ಸುತ್ತಿನಲ್ಲಿಯೇ ಕ್ವಿಜ್ ಮಾಸ್ಟರ್ ಮೇಘವಿ ಪ್ರಶ್ನೆಗಳಿಗೆ ಪಟಪಟನೆ ಉತ್ತರ ಕೊಟ್ಟ ವಿದ್ಯಾರ್ಥಿಗಳು ಉತ್ಸಾಹ ಹೆಚ್ಚಿಸಿದರು. 1989ರಲ್ಲಿ ದೈಲೈಲಾಮಾಗೆ ನೊಬೆಲ್ ಸಮಿತಿಯು ಶಾಂತಿ ಪ್ರಶಸ್ತಿ ಕೊಡುವಾಗ ಯಾರ ಹೆಸರನ್ನು ಉಲ್ಲೇಖಿಸಿತು ಎಂಬ ಮೊದಲ ಪ್ರಶಸ್ತಿಗೆ ಲಿಟಲ್ ರಾಕ್ ಶಾಲೆಯ ವಿದ್ಯಾರ್ಥಿಗಳು ಮಹಾತ್ಮಾ ಗಾಂಧಿ ಎಂದು ಉತ್ತರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಬಳಿಕ ಕ್ರೀಡೆ, ಸಾಹಿತ್ಯ, ವಿಜ್ಞಾನ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ನೀಡಿದರು.
ಮೊದಲ ಸುತ್ತಿನಲ್ಲಿ ಎಲ್ಲ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಆದರೆ, ಎರಡನೇ ಸುತ್ತಿನಲ್ಲಿ ಯಾವ ತಂಡಗಳೂ ಸರಿ ಉತ್ತರ ನೀಡಲಿಲ್ಲ. ಈ ಸಂದರ್ಭ ಕ್ವಿಜ್ ಮಾಸ್ಟರ್ ಮೇಘವಿ ಮಕ್ಕಳಲ್ಲಿ ಹುರುಪು ತುಂಬಿ, ಯೋಚಿಸಿ ಉತ್ತರ ನೀಡುವಂತೆ ಸಲಹೆ ನೀಡಿದರು. ಜತೆಗೆ, ಸುಳಿವುಗಳನ್ನು ನೀಡಿ ಪ್ರೋತ್ಸಾಹಿಸಿದರು.
ಮೂರನೇಯ ನೆಗೆಟಿವ್ ಹಂತದ ಸುತ್ತಿನಲ್ಲಿ ಲಿಟಲ್ ರಾಕ್ ಶಾಲೆಯ ಪ್ರಭವ್ ಹಾಗೂ ರಕ್ಷಿತ್ ಬರೋಬ್ಬರಿ 45 ಅಂಕಗಳನ್ನು ಗಿಟ್ಟಿಸಿ ಭಾರಿ ಮುನ್ನಡೆ ಪಡೆದುಕೊಂಡರು. ನಾಲ್ಕನೇ ಸುತ್ತಿನಲ್ಲಿ ಅದೇ ಶಾಲೆಯ ಅಂಕಿತ್ ಕಿಣಿ ಹಾಗೂ ಮುರಳೀಧರ ರಾವ್ 45 ಅಂಕಪಡೆದು ಸಮಬಲ ಸಾಧಿಸಿದರು.
5ನೇ ಸುತ್ತಿನಲ್ಲಿ ಲಿಟಲ್ ರಾಕ್ ಶಾಲೆಯ ಎರಡು ಶಾಲೆಗಳ ನಡುವೆಯೇ ಪೈಪೋಟಿ ಮುಂದುವರಿಯಿತು. ಅಂತಿಮ ಸುತ್ತಿನಲ್ಲಿ ಎಚ್ಚರಿಕೆಯ ಆಟವಾಡಿದ ಪ್ರಭವ್ ಹಾಗೂ ರಕ್ಷಿತ್ ವಿಜಯಮಾಲೆಗೆ ಕೊರಳೊಡ್ಡಿದರು. ಮೊದಲ ಮೂರು ತಂಡಗಳಿಗೆ ಕ್ರಮವಾಗಿ ₹6000,₹4000 ಹಾಗೂ ₹2000 ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು.
ಕ್ವಿಜ್ ಕಾರ್ಯಕ್ರಮದ ಸಹ ಪ್ರಾಯೋಜಕರಾದ ಮಾಲ್ಗುಡಿ ಡೇಸ್ ಚಿತ್ರತಂಡದ ವಿಜಯ್ ರಾಘವೇಂದ್ರ ವಿಜೇತರಿಗೆ ಬಹುಮಾನ ವಿತರಿಸಿದರು. ದೀಕ್ಷಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಕ್ವಿಜ್ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್, ಹಾಗೂಕೆಎಂಎಫ್ ಸಹ
ಪ್ರಾಯೋಜಕತ್ವ ವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.