ADVERTISEMENT

ಪ್ರಶ್ನೋತ್ತರ: ಸಾಮಾನ್ಯ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 2:17 IST
Last Updated 15 ಏಪ್ರಿಲ್ 2021, 2:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ, ಸಾಮಾನ್ಯ ಅಧ್ಯಯನ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಅತ್ಯಂತ ಮುಖ್ಯವಾದದ್ದು. ಇದಕ್ಕಾಗಿ ಸಂಬಂಧಪಟ್ಟ ಪುಸ್ತಕಗಳನ್ನು ಓದುವುದರ ಜೊತೆಗೆ ಪ್ರಶ್ನೋತ್ತರಗಳ ಕಡೆ ಗಮನ ನೀಡಬೇಕು. ಕೆಪಿಎಸ್‌ಸಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳಲ್ಲಿ ನೆರವಾಗುವ ಕೆಲವು ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಪುಟ್ಟ ವಿವರಣೆಯನ್ನೂ ಕೊಡಲಾಗಿದ್ದು ಸ್ಪರ್ಧಾರ್ಥಿಗಳಿಗೆ ನೆರವಾಗಲಿದೆ.

1) ಕೆಳಗಿನ ಯಾರ ಕಾಲದಲ್ಲಿ ‘ತ್ರಿಪದಿ ಶೈಲಿ’ಯ ಬೆಳವಣಿಗೆಯಾಯಿತು?

ಎ) ರಾಷ್ಟ್ರಕೂಟರು ಬಿ) ಕದಂಬರು
ಸಿ) ಕಲ್ಯಾಣದ ಚಾಲುಕ್ಯರು ಡಿ) ಬಾದಾಮಿಯ ಚಾಲುಕ್ಯರು

ADVERTISEMENT

ಉತ್ತರ: (ಡಿ)

ವಿವರಣೆ: ಈ ಕಾಲದ ಕಾವ್ಯದಲ್ಲಿ ತ್ರಿಪದಿ ಶೈಲಿಯು ಬೆಳವಣಿಗೆಯಾಯಿತು. ಕನ್ನಡದಲ್ಲಿ ಕೃತಿಗಳು ಇಲ್ಲವಾದರೂ ಅನೇಕ ಶಾಸನಗಳು ಕನ್ನಡದಲ್ಲಿ ಬರೆಯಲ್ಪಟ್ಟಿವೆ. ಬಾದಾಮಿಯ ಕಪ್ಟೆ ಆರಭಟ್ಟನ ಶಾಸನದ ಒಂದು ಪದ್ಯವು ತ್ರಿಪದಿ ಶೈಲಿಯಲ್ಲಿರುವುದು ಕಂಡು ಬರುತ್ತದೆ.

2) ಕೆಳಗಿನ ಯಾರ ಕಾಲದಲ್ಲಿ ‘ಕವಿ ಪೊನ್ನನಿಗೆ’ ಆಶ್ರಯ ನೀಡಲಾಗಿತ್ತು?

ಎ) 1ನೇ ಕೃಷ್ಣ ಬಿ) 3ನೇ ಕೃಷ್ಣ
ಸಿ) 3ನೇ ಗೋವಿಂದ ಡಿ) ಧ್ರುವ

ಉತ್ತರ: (ಬಿ)

ವಿವರಣೆ: 3ನೇ ಕೃಷ್ಣನ ಕಾಲದಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯವು ಮತ್ತೊಮ್ಮೆ ಭಾರತದ ರಾಜಕೀಯದಲ್ಲಿ ಅಗ್ರಸ್ಥಾನ ಪಡೆಯಿತು. ಕವಿ ಪೊನ್ನನು ಕೃಷ್ಣ ಆಶ್ರಯ ಪಡೆದಿದ್ದನು.

3) ಯಾವ ಕೃತಿಯನ್ನು ಸಂಸ್ಕೃತ ಭಾಷೆಯ ‘ಪ್ರಥಮ ವಿಶ್ವಕೋಶ’ವೆಂದು ಪರಿಗಣಿಸಲಾಗಿದೆ?

ಎ) ಮಿತಾಕ್ಷರ ಬಿ) ಮನಸೋಲ್ಲಾಸ
ಸಿ) ಜಾತಕ ತಿಲಕ ಡಿ) ಗೋವಿದ್ಯಾ

ಉತ್ತರ: (ಬಿ)

ವಿವರಣೆ: ವಿಕ್ರಮಾದಿತ್ಯನ ನಂತರ ಅವನ ಮಗನಾದ 3ನೇ ಸೋಮೇಶ್ವರನು ಅಧಿಕಾರಕ್ಕೆ ಬಂದನು. ಸೋಮೇಶ್ವರನ ಒಲವು ಸಾಹಿತ್ಯ, ಕಲೆಗಳ ಕಡೆಗಿತ್ತು. ಅವನು ‘ಮಾನಸೋಲ್ಲಾಸ’ ಎಂಬ ಪ್ರಸಿದ್ಧ ಸಂಸ್ಕೃತ ವಿಶ್ವಕೋಶವನ್ನು ರಚಿಸಿದನು. ಇದರಲ್ಲಿ ಸರ್ವಶಾಸ್ತ್ರಗಳೂ ಅಡಗಿವೆ.

4) ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು ಏನೆಂದು ಕರೆಯುತ್ತಿದ್ದರು?

ಎ) ವಿಹಾರಗಳು ಬಿ) ಘಟಿಕಾಲಯಗಳು
ಸಿ) ಚೈತ್ಯಗಳು ಡಿ) ಆಗ್ರಹಾರಗಳು

ಉತ್ತರ: (ಬಿ)

ವಿವರಣೆ: ಹೊಯ್ಸಳರ ಕಾಲದಲ್ಲಿ ಜೈನ, ಬೌದ್ಧ, ಶೈವ, ವೈಷ್ಣವ, ವೀರಶೈವ, ಶ್ರೀ ವೈಷ್ಣವ ಮತಗಳು ಪ್ರಚಲಿತನಾಗಿದ್ದವು. ಆಗ್ರಹಾರಗಳು, ಮಠಗಳು, ದೇವಾಲಯಗಳು ಶಿಕ್ಷಣದ ಕೇಂದ್ರಗಳಾಗಿದ್ದವು. ಮೇಲುಕೋಟೆ, ಸಾಲಗಾಮೆ, ಅರಸೀಕೆರೆ ಮುಂತಾದವು ಗಣ್ಯ ಶಿಕ್ಷಣ ಕೇಂದ್ರಗಳಾಗಿದ್ದವು.

5) ಕೆಳದಿ ನಾಯಕರ ರಾಜ ಲಾಂಛನವು ಏನಾಗಿತ್ತು?

ಎ) ಗಂಡಭೇರುಂಡ ಬಿ) ಆನೆ
ಸಿ) ವರಾಹ ಡಿ) ಸಿಂಹ

ಉತ್ತರ: (ಎ)

ವಿವರಣೆ: ಕೆಳದಿ ಸಂಸ್ಥಾನವು ವಿಶಾಲ ಹಾಗೂ ಸಂಪದ್ಭರಿತವಾಗಿತ್ತು. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು, ಹಾಸನ, ತುಮಕೂರು, ಚಿತ್ರದುರ್ಗ, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಗಳ ಭಾಗಗಳನ್ನು ‘ಕೆಳದಿ ರಾಜ್ಯ’ ಒಳಗೊಂಡಿತ್ತು. ವೆಂಕಟಪ್ಪ ನಾಯಕನು ಕೆಳದಿ ಅರಸರಲ್ಲೇ ಅತ್ಯಂತ ಪ್ರಖ್ಯತನಾಗಿದ್ದನು.

6) ‘ಕರ್ನಾಟಕದ ತಾಜ್‌ಮಹಲ್’ ಎಂದು ಕರೆಯಿಸಿಕೊಳ್ಳುವ ಇಬ್ರಾಹಿಂ ರೋಜಾವನ್ನು ನಿರ್ಮಾಣ ಮಾಡಿದವರು ಯಾರು?

ಎ) 2ನೇ ಇಬ್ರಾಹಿಂ ಬಿ) 1ನೇ ಇಬ್ರಾಹಿಂ
ಸಿ) ಮಹಮ್ಮದ್ ಆದಿಲ್ ಶಾಹಿ ಡಿ) ಇಬ್ರಾಹಿಂ

ಉತ್ತರ: (ಎ)

ವಿವರಣೆ: ಎರಡನೇ ಇಬ್ರಾಹಿಂ. ಭವ್ಯ ಕಟ್ಟಡ ಇಬ್ರಾಹಿಂ ರೋಜಾ ಇವನ ಕಾಲದಲ್ಲಿ ರಚನೆಯಾಗಿದೆ. ಇವನು ಒಬ್ಬ ಸಂಗೀತಗಾರ ಮತ್ತು ಕವಿಯೂ ಕೂಡ ಆಗಿದ್ದನು. ‘ಕಿತಾಬ್-ಇ-ನವರಾಸ್’ ಎಂಬ ಪುಸ್ತಕವನ್ನು ಬರೆದಿದ್ದನು.

7) ಈ ಕೆಳಗಿನ ಯಾವ ವಿಧಿಯು ರಾಷ್ಟ್ರದ ಹಿತದೃಷ್ಟಿಯಿಂದ ರಾಜ್ಯ ಪಟ್ಟಿಯಲ್ಲಿರುವ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತು ಶಾಸನ ರೂಪಿಸಬಹುದು ಎಂಬುದಾಗಿ ತಿಳಿಸುತ್ತದೆ?

ಎ) ವಿಧಿ 200 ಬಿ) ವಿಧಿ 249
ಸಿ) ವಿಧಿ 350 ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಬಿ)

ವಿವರಣೆ: ವಿಧಿ 249 ವಿಧಿಯನ್ವಯ ರಾಷ್ಟ್ರದ ಹಿತದೃಷ್ಠಿಯಿಂದ ರಾಜ್ಯ ಪಟ್ಟಿಯಲ್ಲಿರುವ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತು ಶಾಸನ ರೂಪಿಸಬಹುದು. ರಾಜ್ಯಸಭೆಯ 2/3 ರಷ್ಟು ಸದಸ್ಯರ ಬಹುಮತದಿಂದ ಒಂದು ನಿರ್ಣಯವನ್ನು ಅಂಗೀಕರಿಸಬಹುದು. ಈ ಸಂದರ್ಭದಲ್ಲಿ ಸಂಸತ್ತು ರಾಜ್ಯ ಪಟ್ಟಿಯಲ್ಲಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಶಾಸನ ರೂಪಿಸಬಹುದು.

(ಪ್ರಶ್ನೋತ್ತರ ಸಂಯೋಜನೆ: ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಪರೀಕ್ಷೆ ಕೇಂದ್ರ, ವಿಜಯನಗರ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.