ADVERTISEMENT

ಎಸ್ಎಸ್ಎಲ್‌ಸಿ: ಫೇಲಾಗುವುದು ಬಹಳ ಕಷ್ಟ!

ಜೆಸ್ಸಿ ಪಿ.ವಿ.
Published 1 ಮಾರ್ಚ್ 2026, 22:03 IST
Last Updated 1 ಮಾರ್ಚ್ 2026, 22:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸಾಮಾನ್ಯವಾಗಿ ಯಾವುದಾದರೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟ ಎನ್ನುತ್ತೇವೆ. ಆದರೆ ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲಾಗುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಈ ಪರೀಕ್ಷೆ ವಿದ್ಯಾರ್ಥಿಸ್ನೇಹಿಯಾಗಿ ಮಾರ್ಪಟ್ಟಿದೆ. ಶಿಕ್ಷಣ ಇಲಾಖೆ ಈ ಶೈಕ್ಷಣಿಕ ವರ್ಷದ ಆರಂಭದಲ್ಲೇ ಎಲ್‌ಬಿಎ (ಪಠ್ಯ ಆಧಾರಿತ ಮೌಲ್ಯಮಾಪನ) ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಪ್ರತಿ ವಿಷಯವಾರು ಪ್ರಶ್ನಾಕೋಠಿಯನ್ನು ಬಿಡುಗಡೆ ಮಾಡಿತ್ತು. ಜೊತೆಗೆ ವಿಷಯವಾರು ನೀಲನಕಾಶೆಯನ್ನು ಕೂಡ ಒದಗಿಸಿತ್ತು. ಇದಲ್ಲದೆ ಪ್ರತಿ ವಿಷಯಕ್ಕೆ ತಲಾ ನಾಲ್ಕರಂತೆ ಮಾದರಿ ಪ್ರಶ್ನೆಪತ್ರಿಕೆಗಳನ್ನೂ ಬಿಡುಗಡೆಗೊಳಿಸಿತ್ತು.

ಈ ಬಾರಿ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿಯು ರಾಜ್ಯ ಮಟ್ಟದ ಮೂರು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಿದೆ. ಹಾಗಾಗಿ, ವಿದ್ಯಾರ್ಥಿಗಳಿಗೆ ಯಾವ ಪಾಠದಿಂದ, ಯಾವ ರೀತಿ ಹಾಗೂ ಎಷ್ಟು ಅಂಕದ ಪ್ರಶ್ನೆಗಳನ್ನು ಕೇಳಬಹುದು ಎಂಬ ಬಗ್ಗೆ ಖಚಿತತೆ ಇದೆ. ಪ್ರತಿ ವಿಷಯದಲ್ಲಿ ಕೆಲವು ನಿರ್ದಿಷ್ಟ ವಿಷಯಗಳನ್ನು ಕಲಿತರೆ ವಿದ್ಯಾರ್ಥಿಗಳು ಅನಾಯಾಸವಾಗಿ ಉತ್ತೀರ್ಣರಾಗಬಹುದು. ಉದಾಹರಣೆಗೆ, ನಾನು ಬೋಧಿಸುತ್ತಿರುವ ದ್ವಿತೀಯ ಭಾಷೆ ಇಂಗ್ಲಿಷ್‌ ಅನ್ನು ತೆಗೆದುಕೊಂಡರೆ, ಹಿಂದಿನ ವರ್ಷದವರೆಗೆ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಭ್ಯಾಸ ಮಾಡಿಸುವಾಗ, ನಾವು ಒಂದು ಪರಿಕಲ್ಪನೆಗೆ ಸಂಬಂಧಿಸಿದ ಉದಾಹರಣೆಗಳನ್ನಷ್ಟೇ ನೀಡಬಹುದಿತ್ತು. ಆದರೆ ನಿರ್ದಿಷ್ಟ ಪ್ರಶ್ನೆ ಯಾವುದು ಎಂದು ಹೇಳಲು ಸಾಧ್ಯವಿರಲಿಲ್ಲ. ಆದರೆ ಈಗ ಎಲ್‌ಬಿಎ ಕ್ವಶ್ಚನ್‌ ಬ್ಯಾಂಕ್‌ನಲ್ಲಿ ಕೊಟ್ಟಿರುವ ಎಲ್ಲ ಪ್ರಶ್ನೆಗಳನ್ನೂ ಓದಿಕೊಂಡರೆ, ಅಲ್ಲಿನ ಪ್ರಶ್ನೆಗಳಲ್ಲಿ ಒಂದಾದರೂ ಪರೀಕ್ಷೆಗೆ ಬರುವುದು ಖಚಿತ.

ADVERTISEMENT

ವ್ಯಾಕರಣ ಅಷ್ಟೇ ಅಲ್ಲ 2, 3 ಹಾಗೂ 4 ಅಂಕಗಳ ಪ್ರಶ್ನೆಗಳು ಕೂಡ ಎಲ್‌ಬಿಎಯಲ್ಲಿ ಇವೆ. ವಿದ್ಯಾರ್ಥಿಗಳು ಕೆಲವು ಪಾಠಗಳಿಂದ ಬರೀ ಎರಡು ಅಂಕದ ಪ್ರಶ್ನೆ, ಕೆಲವು ಪಾಠಗಳಿಂದ ಮೂರು ಅಂಕದ ಪ್ರಶ್ನೆ, ಕೆಲವು ಪಾಠಗಳಿಂದ ಕೇವಲ ನಾಲ್ಕು ಅಂಕದ ಪ್ರಶ್ನೆಗಳಿಗೆ ಉತ್ತರ ಕಲಿತರೆ ಸಾಕು. ಎಲ್ಲವನ್ನೂ ಓದಿ ಮರೆಯುವ ಭೀತಿಯಿಂದ ಪಾರಾಗಲು ಇದು ನೆರವಾಗುತ್ತದೆ. ಬಾಹ್ಯ ಪರೀಕ್ಷೆಯಲ್ಲಿ ಗಳಿಸಬೇಕಾದ ಅಂಕದ ಮಿತಿಯನ್ನು ಇಳಿಸಿರುವುದು ಸಹ ವಿದ್ಯಾರ್ಥಿಗಳ ಉತ್ತೀರ್ಣತೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕಲಿಕೆಯಲ್ಲಿ ಬಹಳಷ್ಟು ಜಾಣರಾದ ವಿದ್ಯಾರ್ಥಿಗಳಿಗೆ ಇದು ಮಿತಿ ಹೇರಿದಂತೆ ಅನಿಸಿದರೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಾಲಿಗೆ ಈ ಬಾರಿಯ ಕ್ರಮಗಳು ವರದಾನ ಆಗುವುದರಲ್ಲಿ ಸಂದೇಹವಿಲ್ಲ. ಉನ್ನತ ಬುದ್ಧಿಮಟ್ಟದ ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ಗಳಿಸುವ, ಕಲಿಕಾ ನ್ಯೂನತೆಯ ಮಕ್ಕಳಿಗೆ ಪಾಸ್ ಆಗುವ ಕನಸನ್ನು ನನಸಾಗಿಸಿಕೊಳ್ಳುವ ಅವಕಾಶವನ್ನು ಇದು ನೀಡಿದೆ.

ಪ್ರಿಯ ವಿದ್ಯಾರ್ಥಿಗಳೇ, ಭಯ ಬಿಟ್ಟು, ಆತ್ಮವಿಶ್ವಾಸದಿಂದ ತಯಾರಿ ನಡೆಸಿ. ಗೆಲುವು ನಿಮ್ಮದಾಗುವುದು ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.