ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಕರ್ನಾಟಕ ಶೀಘ್ರಲಿಪಿಗಾರ ಸಂಘವು 1919ರ ಸೆಪ್ಟೆಂಬರ್ 20ರಂದು ಸ್ಥಾಪನೆಯಾಗಿತ್ತು. ಶೀಘ್ರಲಿಪಿಕಾರರಾದಎಸ್.ಜಿ ನರಸಿಂಹಯ್ಯ, ಟಿ.ಎನ್. ರಾಘವಾಚಾರ್ ಮತ್ತು ಡಿ.ಕೆ. ರಾಮಚಂದ್ರಯ್ಯ ಅವರು ಸ್ಥಾಪಿಸಿದ ಈ ಸಂಘವು ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ.
1922ರಲ್ಲಿ ನೋಂದಣಿಯಾದ ಈ ಸಂಘವು 1944ರಲ್ಲಿ ಬೆಳ್ಳಿಹಬ್ಬ ಆಚರಿಸಿಕೊಂಡಿದೆ. ಶೀಘ್ರಲಿಪಿ ಕಲೆಯ ಆಸಕ್ತರಿಗೆ ಉತ್ತೇಜನ, ಅವರಿಗೆ ವೃತ್ತಿಯಲ್ಲಿ ದಕ್ಷತೆ ವೃದ್ದಿಸಲು ಸಹಾಯ ಮಾಡುವುದು, ಸರ್ಕಾರಿ ಕಚೇರಿಗಳಿಗೆ, ಖಾಸಗಿ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಉತ್ತಮ ವೃತ್ತಿಪರ ಸೇವೆ ದೊರಕುವಂತೆ ಮಾಡುವುದು ಈ ಸಂಘದ ಉದ್ದೇಶ.
ಈ ಸಂಘದ ಪ್ರಥಮ ಅಧ್ಯಕ್ಷರಾಗಿದ್ದವರು ರಾವ್ ಸಾಹೇಬ್ ಸಿ.ಹಯವದನರಾವ್. ಎನ್. ದೇವರಾವ್ ಪ್ರಥಮ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಸಾಹಿತಿ ಮತ್ತು ಪತ್ರಕರ್ತರಾದ ಡಿ.ವಿ.ಗುಂಡಪ್ಪ (ಡಿ.ವಿ.ಜಿ.) ಅವರು 1928-34ರ ಅವಧಿಯಲ್ಲಿ ಗೌರವಾಧ್ಯಕ್ಷರಾಗಿದ್ದರು. ಎಸ್.ಡಿ.ಗಣೇಶ್ರಾವ್, ಖ್ಯಾತ ಪತ್ರಕರ್ತ ಕೆ.ಎಸ್. ರಾಮಸ್ವಾಮಿ, ಲ. ರಾಘವೇಂದ್ರ ಮೊದಲಾದವರು ಗೌರವ ಅಧ್ಯಕ್ಷರಾಗಿದ್ದರು. ಈಗ ಎಚ್.ಬಿ.ಎಸ್.ಆರಾಧ್ಯ ಅವರು ಅಧ್ಯಕ್ಷರಾಗಿದ್ದಾರೆ.
ಸೆ.14, 15ಕ್ಕೆ ಕರ್ನಾಟಕ ಶೀಘ್ರಲಿಪಿಗಾರರ ಸಂಘದ ಶತಮಾನೋತ್ಸವ ಸಮಾರಂಭ ನಡೆಯಲಿದೆ. ಶನಿವಾರಬೆಳಿಗ್ಗೆ 10.30ಕ್ಕೆ ಅಜಯ್ ಶ್ರೀನಿವಾಸ್ ಓಕ ಅವರು ಸಮಾರಂಭದ ಉದ್ಘಾಟನೆ ಮಾಡಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಎಸ್. ರಾಮನಾಥನ್ ಅವರು ಶೀಘ್ರಲಿಪಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶತಮಾನೋತ್ಸವ ಕೇಂದ್ರಿಯ ಸಮಿತಿ ಅಧ್ಯಕ್ಷ ಟಿ.ಎನ್.ಧ್ರುವಕುಮಾರ್ ವಹಿಸಿಕೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಭಾನುವಾರ ಬೆಳಿಗ್ಗೆ ಎಸ್. ಸುರೇಶ್ಕುಮಾರ್ ಅವರುಶೀಘ್ರಲಿಪಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಸಂತೋಷ್ ಹೆಗ್ಡೆ ಅವರು ಶೀಘ್ರಲಿಪಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಿದ್ದಾರೆ. ಸ್ಥಳ– ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಭಾಂಗಣ, ಕಬ್ಬನ್ ಉದ್ಯಾನವನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.