ADVERTISEMENT

ಸಿನಿ ತಾರೆಯರಿಗೆ ಮತ ಕೊಡೊದಾಗಿದ್ರೆ ಅಂಬರೀಷ್ ಏಕೆ ಸೋಲುತ್ತಿದ್ರು: ಶ್ರೀಕಂಠೇಗೌಡ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 12:54 IST
Last Updated 14 ಏಪ್ರಿಲ್ 2019, 12:54 IST
   

ಹಾಸನ: ‘ಸಿನಿಮಾ ತಾರೆಯರನ್ನ ಕೇಳಿ‌ ಮತ ಕೊಡುವುದಾಗಿದ್ದರೆ ನಟ ಅಂಬರೀಷ್ ಮೂರು ಬಾರಿ ಏಕೆ ಸೋಲುತ್ತಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ಸಿನಿಮಾ ನೋಡುವ ದೃಷ್ಟಿಕೋನವೇ ಬೇರೆ. ನಟರಿಗೆ ಕೊಡುವ ಗೌರವವೇ ಬೇರೆ. ಹಾಗೆಯೇ ಚುನಾವಣಾ ರಾಜಕಾರಣವೇ ಬೇರೆ. ಯಾರು ಜನರ ಕಷ್ಟಕ್ಕೆ ಸ್ಪಂದಿಸುತ್ತಾರೋ ಅವರನ್ನ ಚುನಾಯಿಸುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ನಟರಿಗೆ ಟಾಂಗ್ ನೀಡಿದರು.

ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ಸುದ್ದಿ ವಾಹಿನಿಯೊಂದು ಸುಮಲತಾ ಕುರಿತು ಮಂಡ್ಯ ಗೌಡ್ತಿ ಎಂಬ ಹೆಸರಿನ ಎಪಿಸೋಡ್ ಮಾಡುತ್ತಿತ್ತು. ನನ್ನ ಪ್ರತಿಕ್ರಿಯೆ ಕೇಳಿದಾಗ, ‘ಸುಮಲತಾ ನಮ್ಮ ಸೊಸೆ. ಆಂಧ್ರದಿಂದ ‌ಬಂದವರು. ಅಂಬರೀಷ್ ನನ್ನ ಕಾಲಕ್ಕೆ ರಾಜಕೀಯ ಸಾಕು. ನನ್ನ ಮಗನಿಗೆ ಬೇಡ ಎಂದು ಹೇಳಿದ್ದನ್ನು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದೆ. ಆದರೆ ಅದನ್ನು ಎಡಿಟ್‌ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ರಾಜ್ಯ ರಾಜಕಾರಣದಲ್ಲಿ ದೇವೇಗೌಡರಿಗೆ ಶಕ್ತಿ ತುಂಬಲು ನಿರ್ಧರಿಸಿದ್ದೇವೆ. ಚುನಾವಣೆಯಲ್ಲಿ ಶಿಕ್ಷಕ ಹಾಗೂ ನೌಕರ ಸಮುದಾಯ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ. ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಕ ವೃಂದಕ್ಕೆ ಹಲವು ಸೌಲಭ್ಯಗಳನ್ನು ನೀಡಿದ್ದಾರೆ ಎಂದು ನುಡಿದರು.

ಸಿ.ಎಂ ಮಂಡಿಸಿದ ಬಜೆಟ್ ಕೇವಲ‌ ಮಂಡ್ಯ- ಹಾಸನ ಜಿಲ್ಲೆಗಳಿಗೆ ಸೇರಿದೆ ಎಂದು ಪ್ರತಿಭಟನೆ ಮಾಡಿದ್ದ ಬಿಜೆಪಿಗೆ ಮತ ಕೇಳಲು ಯಾವ ನೈತಿಕತೆ ಇದೆ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ನಿರಾಯಾಸವಾಗಿ ಜಯಗಳಿಸುತ್ತಾರೆ. ಚಿತ್ರನಟರಾದ ದರ್ಶನ್‌ ಮತ್ತು ಯಶ್‌ ಪ್ರಚಾರ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.