ADVERTISEMENT

ಕ್ಷೇತ್ರ ಮಹಾತ್ಮೆ; ಬೆಂಗಳೂರು ದಕ್ಷಿಣ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 21:09 IST
Last Updated 25 ಮಾರ್ಚ್ 2024, 21:09 IST
   

ವಿಧಾನಸಭೆ, ಬಿಬಿಎಂಪಿ ಹೀಗೆ ಯಾವುದೇ ಚುನಾವಣೆ ನಡೆದರೂ ಬೆಂಗಳೂರಿನ ವಿಷಯಕ್ಕೆ ಬಂದರೆ ಹಾಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಮಾತೇ ಎಲ್ಲ ಪಕ್ಷಗಳಿಗೂ ‘ಮಾಣಿಕ್ಯ’. ಬಿಜೆಪಿ, ಜೆಡಿಎಸ್‌ನವರಿಗೂ ರಾಮಲಿಂಗಾರೆಡ್ಡಿಯವರ ಮಾತಿನ ತೂಕವೇ ಒಂದು ಕೈ ಮಿಗಿಲು.

ಸಚಿವರೇ ಲೋಕಸಭೆಗೆ ಹುರಿಯಾಳು ಆಗಬೇಕು ಎಂಬ ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡಕ್ಕೆ ಮಣಿದ ರೆಡ್ಡಿ, ಈ ಬಾರಿ ‘ಮಿತ್ರ’ರ ವಿರುದ್ಧವೇ ಬಡಿದಾಡಿ ತಮ್ಮ ಶಕ್ತಿ ಪ್ರದರ್ಶಿಸಬೇಕಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಿಂದುತ್ವದ ಉಗ್ರ ಪ್ರತಿಪಾದಕ, ತೇಜಸ್ವಿ ‘ಸೂರ್ಯ’ ವಿರುದ್ಧ ತಮ್ಮ ಮಗಳು ‘ಸೌಮ್ಯಾ’ ಅವರನ್ನು ತಮ್ಮ ಸೌಮ್ಯವಾದ ನಡೆಯಲ್ಲೇ ಗೆಲ್ಲಿಸಿಕೊಳ್ಳಬೇಕಿದೆ.

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಹಾಲಿ ಸಂಸದ ತೇಜಸ್ವಿ ಸೂರ್ಯ ಬೆನ್ನಿಗೆ, ಚಿಕ್ಕಪ್ಪ, ಶಾಸಕ ‘ರವಿ’ಸುಬ್ರಹ್ಮಣ್ಯ ನಿಂತಿದ್ದರೆ, ಬಿಜೆಪಿಯ ಬಲಿಷ್ಠ ಮತಬ್ಯಾಂಕ್‌ ಅವರ ಆಸ್ತಿಯಾಗಿದೆ. ಬಿಜೆಪಿಯ ಕೋಟೆಯಾಗಿದ್ದ ಜಯನಗರ ಕ್ಷೇತ್ರವನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಕಿತ್ತುಕೊಂಡಿದ್ದ ರೆಡ್ಡಿ, ಮಗಳು ಸೌಮ್ಯಾರನ್ನು ಗೆಲ್ಲಿಸಿಕೊಂಡಿದ್ದರು. 2023ರಲ್ಲಿ ಅದು ಕೈತಪ್ಪಿಹೋಯಿತು. ಬೆಂಗಳೂರನ್ನೇ ತಮ್ಮ ಅಂಗೈಯಲ್ಲಿ ಆಡಿಸುವ ರೆಡ್ಡಿಯವರಿಗೆ, ಸೌಮ್ಯವಾಗಿ ‘ಸೂರ್ಯ’ರನ್ನು ತಮ್ಮ ಮುಷ್ಟಿಯಲ್ಲಿ ಹಿಡಿದುಕೊಳ್ಳುವ ಅವಕಾಶವನ್ನು ಪಕ್ಷ ಕೊಟ್ಟಿದೆ. ಸೂರ್ಯ ಬೆಳಗುತ್ತಾರೋ, ಹಸ್ತ ಅರಳುತ್ತದೋ ಕಾದು ನೋಡಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.