ಕೊರಟಗೆರೆ: ಚುನಾವಣಾ ಪ್ರಣಾಳಿಕೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಯಾವುದೇ ಯೋಜನೆ ನೀಡದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿತ್ರದುರ್ಗದಲ್ಲಿ ಮದಕರಿ ನಾಯಕ, ಒನಕೆ ಓಬವ್ವ ಬಗ್ಗೆ ಮಾತನಾಡುತ್ತಾರೆ. ಇಂತವರಿಗೆ ನಾಚಿಕೆಯಾಗಬೇಕು’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಲೇವಡಿ ಮಾಡಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸುವುದೇ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ₹ 560 ಕೋಟಿಗೆ ಒಂದು ಯುದ್ಧ ವಿಮಾನದಂತೆ 130 ಯುದ್ಧ ವಿಮಾನ ಖರೀದಿಸಲು ಒಡಂಬಡಿಕೆಗೆ ಸಹಿ ಹಾಕಲಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಅದನ್ನು ತಿರಸ್ಕರಿಸಿ 1,660 ಕೋಟಿಗೆ ಒಂದು ಯುದ್ಧ ವಿಮಾನದಂತೆ ಕೇವಲ 36 ವಿಮಾನ ಖರೀದಿಸಲಾಗಿದ. ಇದರಲ್ಲಿ ₹ 30 ಸಾವಿರ ಕೋಟಿ ಹಣ ಹೆಚ್ಚಾಗಿದೆ. ಆ ಹಣ ಎಲ್ಲಿ ಹೋಯಿತು ಎಂದು ಮೋದಿ ಉತ್ತರ ನೀಡಬೇಕು ಎಂದರು.
ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಮಾತನಾಡಿ, ‘ದೇವೇಗೌಡರು ನಾಯಕ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಜನಾಂಗದ ಗುರುಪೀಠಕ್ಕೆ ಜಮೀನು ನೀಡಿದ್ದಾರೆ. ದೇವೇಗೌಡರಿಂದಲೇ ಹಿಂದುಳಿದ ವರ್ಗಗಳು ರಾಜಕೀಯವಾಗಿ ಬೆಳೆಯಲು ಅನುಕೂಲವಾಗಿದೆ ಎಂದರು.
ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಆರ್.ಶಿವರಾಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಎ.ಡಿ. ಬಲರಾಮಯ್ಯ, ಕೊಂಡವಾಡಿ ಚಂದ್ರಶೇಖರ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರೇಮಾ, ಹಾಲು ಒಕ್ಕೂಟದ ನಿರ್ದೇಶಕರಾದ ಈಶ್ವರಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನರಸಮ್ಮ, ಮುಖಂಡರಾದ ಅರಕೆರೆ ಶಂಕರ್, ಮೆಡಿಕಲ್ ಅಶ್ವತ್ಥ್, ತುಂಬಾಡಿ ರಾಮಚಂದ್ರಪ್ಪ, ಮಹಾಲಿಂಗಪ್ಪ, ಮೈಲಾರಪ್ಪ, ಮಯೂರ ಗೋವಿಂದರಾಜು, ಚಂದ್ರಶೇಖರ್ ಗೌಡ, ವಾಲೆಚಂದ್ರಯ್ಯ, ಕವಿತಾ, ಜಯಮ್ಮ, ಮಂಜಮ್ಮ, ರಾಜಕುಮಾರ್, ಬೈಲಪ್ಪ, ಎಲ್.ರಾಜಣ್ಣ, ಹುಲಿಕುಂಟೆ ಮಲ್ಲಿಕಾರ್ಜುನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.