ಹುಬ್ಬಳ್ಳಿ: ‘ಕೇಂದ್ರದ ಬಿಜೆಪಿ ಸರ್ಕಾರ ಕೃಷಿ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿದ್ದು, ರೈತರು ಈ ಬಾರಿ ಆ ಪಕ್ಷಕ್ಕೆ ಮತ ಹಾಕಬಾರದು’ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರೈತ ಮುಖಂಡ ಬಾಬಾಗೌಡ ಪಾಟೀಲ ಕರೆ ನೀಡಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ಕೋಟಿ ಉದ್ಯೋಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಮೋದಿ ಅವರು, ಆ ವಿಷಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸ್ವತಂತ್ರ ಸಂಸ್ಥೆಗಳಾದ ಜಾರಿ ನಿರ್ದೇಶನಾಲಾಯ, ಸಿಬಿಐ, ನೀತಿ ಆಯೋಗಗಳನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ದೂರಿದರು.
‘ಕಾಂಗ್ರೆಸ್ 70 ವರ್ಷಗಳಲ್ಲಿ ಮಾಡದ ಸಾಧನೆ ಮಾಡಿದ್ದೇನೆ ಎಂದು ಮೋದಿ ಹೇಳುತ್ತಾರೆ. ಎಷ್ಟು ಅಣೆಕಟ್ಟು ನಿರ್ಮಾಣ ಮಾಡಿದ್ದಾರೆ. ಎಷ್ಟು ಎಕರೆ ಪ್ರದೇಶವನ್ನು ನೀರಾವರಿಗೊಳಿಸಿದ್ದಾರೆ? ಉದ್ಯೋಗ ಸೃಷ್ಟಿಯಾಗುವಂತಹ ಯಾವ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ ಎಂದು ಅವರು ಹೇಳಬೇಕು’ ಎಂದು ಪ್ರಶ್ನಿಸಿದರು.
‘ಉತ್ಪಾದನೆಗೆ ಉತ್ತೇಜನ ನೀಡುವಂತಹ ಯೋಜನೆಗಳನ್ನು ಸರ್ಕಾರ ಘೋಷಿಸಬೇಕೇ ವಿನಹ, ಜನರನ್ನು ಆಲಸಿಗಳನ್ನಾಗಿ ಮಾಡುವಂತಹ ಯೋಜನೆ ಅನುಷ್ಠಾನ ಮಾಡಬಾರದು. ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಮಂತ್ರಿ ಹುದ್ದೆಗೇರುವಷ್ಟು ಪ್ರಬುದ್ಧತೆ ಇಲ್ಲ’ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.