ಬಸವಕಲ್ಯಾಣ: ಇಲ್ಲಿನ ತ್ರಿಪುರಾಂತ ಓಣಿಯ ನಿವಾಸಿ ಶಿವರಾಜ ತಿಮ್ಮಣ್ಣ ಬೊಕ್ಕೆ ಬೀದರ್ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸೈಕಲ್ ಮೇಲೆ ಪ್ರಚಾರ ಕೈಗೊಂಡಿದ್ದಾರೆ.
ಶಿವರಾಜ ತಿಮ್ಮಣ್ಣ ಅವರು ಬಿ.ಎ, ಬಿ.ಇಡಿ ಪದವೀಧರರು. ಕೃಷಿ ಕಾಯಕ ಕೈಗೊಂಡಿದ್ದಾರೆ. ಪ್ರತಿನಿತ್ಯ ಸೈಕಲ್ನಲ್ಲಿ ಹೊಲಕ್ಕೆ ಹೋಗಿ ಬರುತ್ತಾರೆ. ಈಗ ಅದೇ ಸೈಕಲ್ ಏರಿ, ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ತಮಗೆ ಮತ ನೀಡುವಂತೆ ಜನರ ಗಮನ ಸೆಳೆಯುತ್ತಿದ್ದಾರೆ.
ಇದು ಅವರು ಸ್ಪರ್ಧಿಸುತ್ತಿರುವ 7ನೇ ಚುನಾವಣೆ. ಈ ಮೊದಲು ಎರಡು ಸಲ ವಿಧಾನಸಭೆ, ಎರಡು ಬಾರಿ ಲೋಕಸಭೆ ಹಾಗೂ ಒಂದು ಬಾರಿ ನಗರಸಭೆ, ಒಂದು ಬಾರಿ ಪಿಕೆಪಿಎಸ್ ಹಾಗೂ ಒಮ್ಮೆ ಎಸ್.ಡಿ.ಎಂ.ಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದರು. ಐದು ವರ್ಷ ಪಿಕೆಪಿಎಸ್ ಅಧ್ಯಕ್ಷರಾಗಿದ್ದರು. 3 ವರ್ಷ ಟಿಎಪಿಸಿಎಂಎಸ್ ನಿರ್ದೇಶಕರಾಗಿದ್ದರು. ಒಂದು ಅವಧಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ಆಗಿದ್ದರು. ಪತ್ನಿ ಭಾಗೀರಥಿ ಅವರನ್ನೂ ಒಂದು ಬಾರಿ ವಿಧಾನಸಭೆ ಚುನಾವಣೆಗೆ ನಿಲ್ಲಿಸಿದ್ದರು.
‘ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಜನರಿಗೆ ಮೋಸ ಮಾಡಿವೆ. ರೈತರ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುವ, ಬಡವರ, ಹಿಂದುಳಿದವರ ಹಿತ ಕೈಗೊಳ್ಳುವ ಜನಪ್ರತಿನಿಧಿಗಳ ಅವಶ್ಯಕತೆಯಿದೆ. ನಾನು ಭ್ರಷ್ಟಾಚಾರರಹಿತ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ' ಎಂದು ಶಿವರಾಜ ಬೊಕ್ಕೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.