ಹೊನ್ನಾಳಿ: ‘ಅವರವರ ಮೂಗಿನ ನೇರಕ್ಕೆ ಬರೆದುಕೊಂಡಿರುವ ಇತಿಹಾಸ ನಮಗೆ ಬೇಡ. ಸತ್ಯವನ್ನು ಹೇಳುವ ಇತಿಹಾಸ ಬೇಕಿದೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ ರಾಜ್ಯ ಸಚಿವ ಅನಂತ ಕುಮಾರ ಹೆಗಡೆ ಹೇಳಿದರು.
ಪಟ್ಟಣದಲ್ಲಿ ಗುರು ಸಿದ್ಧರಾಮೇಶ್ವರರ ಜಯಂತ್ಯುತ್ಸವದ ಎರಡನೇ ದಿನವಾದ ಸೋಮವಾರದ ಕಾರ್ಯಕ್ರಮ ಹಾಗೂ ಮಹಿಳಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
‘ಗೋವಿಗೆ ಪೂಜ್ಯ ಸ್ಥಾನ ಕೊಟ್ಟಿರುವ ದೇಶ ನಮ್ಮದು. ಗೋವನ್ನು ಪೂಜೆ ಮಾಡುವ ಸಂಸ್ಕೃತಿ ಹೊಂದಿರುವ ನಮ್ಮ ದೇಶದಲ್ಲಿ ಗೋಹತ್ಯೆ ಮಾಡುವ ಬಗ್ಗೆ, ಗೋ ಭಕ್ಷಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಕೆಲವರಿಗೆ ಸರಿ ಕಾಣುತ್ತಿಲ್ಲ’ ಎಂದರು.
‘ಬ್ರಿಟಿಷ್ ಹಾಗೂ ಅಮೆರಿಕನ್ನರ ಇತಿಹಾಸವನ್ನು ಒಂದೆರಡು ದಿನಗಳಲ್ಲಿ ಕೆಲವೇ ಪುಟಗಳಲ್ಲಿ ಬರೆಯಬಹುದು. ಆದರೆ ಭಾರತದ ಇತಿಹಾಸ ಕೆದಕಿದರೆ ಅಂತ್ಯವೇ ಇಲ್ಲ. ಅಂತಹ ಸುಸಂಸ್ಕೃತ, ಪುರಾತನ ದೇಶ ನಮ್ಮದು’ ಎಂದರು.
ಸಾಧು ಸಂತರು ಕೇವಲ ಧ್ಯಾನ ಮಾಡುತ್ತ ಕೂರಲಿಲ್ಲ. ಅನೇಕ ವಿಷಯಗಳ ಮೇಲೆ ಸಂಶೋಧನೆ ನಡೆಸಿದರು. ಜಗತ್ತಿಗೆ ಸೊನ್ನೆಯ ಪರಿಕಲ್ಪನೆ ನೀಡಿದ ದೇಶ ಭಾರತ. ವೈದ್ಯ ಸಲಕರಣೆ, ಔಷಧಿಗಳ ತಯಾರಿಕೆ, ಬಳಕೆ ಕುರಿತು ಬೆಳಕು ಚೆಲ್ಲಿದವರು ಚರಕ ಮುನಿ. ನಮ್ಮದು ಸಾಧು ಸಂತರಿಂದ ಕೂಡಿದ ಪುಣ್ಯ ಭೂಮಿ ಎಂದರು.
‘ರಾಮ, ಕೃಷ್ಣ, ವ್ಯಾಸ, ವಾಲ್ಮೀಕಿಯಂಥವರನ್ನು ಅವರ ಸಾಧನೆಗಳಿಂದ ಹಿಂದೂ ಸಮಾಜ ಪೂಜಿಸುತ್ತದೆಯೇ ಹೊರತು ಜಾತಿಯಿಂದಲ್ಲ.
ಬ್ರಾಹ್ಮಣರನ್ನು ಟೀಕೆ ಮಾಡುವ ಮೊದಲು ಸತ್ಯ ಅರಿಯಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.