ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಾರ್ಚ್ 21ರಂದು ಬಿಡುಗಡೆ ಮಾಡಲಿದ್ದಾರೆ. ನಮ್ಮ ಪ್ರಣಾಳಿಕೆ ಬಹುತೇಕ ಅಂತಿಮವಾಗಿದೆ ಎಂದು ಪ್ರಣಾಳಿಕೆ ರಚನೆ ಸಮಿತಿಯ ಸದಸ್ಯರಾಗಿರುವ ಕೇಂದ್ರದ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.
ಮಾರ್ಚ್ 16ರಂದು ನಡೆಯಲಿರುವ ಪ್ರಣಾಳಿಕೆ ಸಮಿತಿ ಸಮಿತಿಯಲ್ಲಿ ಪ್ರಣಾಳಿಕೆಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿದು ಬಂದಿದೆ. ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಸಮಾಲೋಚನೆ ನಡೆಸಿ ಪ್ರಣಾಳಿಕೆ ರಚಿಸಲಾಗಿದೆ.
ದೇಶದಾದ್ಯಂತ ಹಲವು ಸಮುದಾಯಗಳ ಜೊತೆಗೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ನೇರ ಸಂಭಾಷಣೆ ನಡೆಸಿ ಪಡೆದುಕೊಂಡ ಅಂಶಳಗೂ ಪ್ರಣಾಳಿಕೆಯಲ್ಲಿ ಸೇರಿವೆ ಎನ್ನಲಾಗಿದೆ. ರಕ್ಷಣಾ ಸಚಿವ ಎ.ಕೆ. ಆಂಟನಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಉದ್ಯೋಗ, ಆರೋಗ್ಯದ ಹಕ್ಕು: ಹಕ್ಕುಗಳಿಗೆ ಸಂಬಂಧಿಸಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳು ಪ್ರತಿಫಲ ನೀಡುತ್ತವೆ ಎಂದು ಮನಗಂಡಿರುವ ಕಾಂಗ್ರೆಸ್, ತನ್ನ ಪ್ರಣಾಳಿಕೆಯಲ್ಲಿ ಆರೋಗ್ಯ ಮತ್ತು ಉದ್ಯೋಗದ ಹಕ್ಕನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ಈಗ ಸರ್ಕಾರಿ ಉದ್ಯೋಗ ಕಡಿಮೆಯಾಗುತ್ತಿದೆ. ಹಾಗಾಗಿ ಖಾಸಗಿ ವಲಯದಲ್ಲಿ ಜನರಿಗೆ ಉದ್ಯೋಗ ಒದಗಿಸುವುದಕ್ಕೆ ಸಂಬಂಧಿಸಿ ಕೆಲವು ನಿರ್ದಿಷ್ಟ ಕ್ರಮಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ಮುಂದಾಗಿದೆ.
ಮಧ್ಯಮ ವರ್ಗದಿಂದ ಕೆಳಗೆ ಮತ್ತು ಬಡತನ ರೇಖೆಗಿಂತ ಮೇಲಿರುವ ಸುಮಾರು 70 ಕೋಟಿ ಜನರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ಭದ್ರತೆ ಒದಗಿಸುವ ವಿಚಾರವನ್ನು ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ. ಇದು ಪಕ್ಷದ ಪ್ರಣಾಳಿಕೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.
ನಗರದ ಮಧ್ಯಮ ವರ್ಗ ಬಿಜೆಪಿ ಪರವಾಗಿ ವಾಲಿರುವಾಗ ಕುಶಲ ಕರ್ಮಿಗಳು ಮತ್ತು ಕಡಿಮೆ ಆದಾಯದ ವರ್ಗ ಪಕ್ಷದ ಬೆಂಬಲ ನೆಲೆಯಾಗಬಹುದು ಎಂಬ ಚಿಂತನೆ ಕಾಂಗ್ರೆಸ್ನಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.